ಚಾಮರಾಜನಗರ: ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿದ ರೈತರು, ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಮ್ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ₹2 ಲಕ್ಷದವರೆಗಿನ ಸುಸ್ತಿ ಸಾಲ ಮಾತ್ರ ಮನ್ನಾ ಮಾಡುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಮೂಗಿಗೆ ತುಪ್ಪ ಸವರಿದ್ದಾರೆ ಎಂದು ದೂರಿದರು.
ಪ್ರಸ್ತುತ ವರ್ಷದ ಅವಧಿವರೆಗಿನ ರೈತರ ಎಲ್ಲ ಸಾಲಗಳನ್ನು ಮನ್ನಾ ಮಾಡಬೇಕು.ಮಾಡದಿದ್ದರೆ ಸರ್ಕಾರಕ್ಕೆ ನೀಡಬೇಕಿರುವ ಯಾವುದೇ ತೆರಿಗೆಯನ್ನು ರೈತರು ನೀಡುವುದಿಲ್ಲ. ಇದರ ನಷ್ಟವನ್ನು ಸರ್ಕಾರವೇ ಭರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಾಲ ಪಾವತಿಸಿದ ರೈತರ ಹಣದಲ್ಲಿ ಶೇ 50ರಷ್ಟು ಹಣವನ್ನು ಅವರ ಖಾತೆಗಳಿಗೆ ಜಮಾ ಮಾಡಬೇಕು. ಮುಂದಿನ ದಿನಗಳಲ್ಲಿ ರೈತರು ಸಾಲಗಾರರಾಗದಂತೆ ತಡೆಯಲು ವೈಜ್ಞಾನಿಕ ಮಾರುಕಟ್ಟೆ ನೀತಿ ಸೇರಿದಂತೆ ರೈತಪರ ಕಾನೂನು ಜಾರಿಗೊಳಿಸಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಆಗ್ರಹಿಸಿದರು.
ಸಾವಯವ ಕೃಷಿಗೆ ಉತ್ತೇಜನ ನೀಡುವ ಜತೆಗೆ ನಾಟಿ ಬೀಜ, ನಾಟಿ ಹಸುಗಳ ಸಂರಕ್ಷಣೆಗೆ ಒತ್ತು ನೀಡಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಿ ರೈತರಿಗೆ ಮೊದಲ ಆದ್ಯತೆ ನೀಡಬೇಕು. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಮಾಡ್ರಳ್ಳಿ ಮಹಾದೇವಪ್ಪ, ಖಜಾಂಚಿ ಅಂಬಳೆ ಶಿವಕುಮಾರ್, ಬಸವಣ್ಣ, ಚಂಗಡಿ ಕರಿಯಪ್ಪ, ಮಣಿಗರ್ ಪ್ರಸಾದ್, ಕಸ್ತೂರು ನಾಗರಾಜು, ಬೂದಿತಿಟ್ಟು ಮಹೇಶ್ ಪಾಲ್ಗೊಂಡಿದ್ದರು.