ಧಾರವಾಡ: ಇಲ್ಲಿನ ಸುಭಾಸ ರಸ್ತೆಯಲ್ಲಿರುವ ಬಿಜೆಪಿ ಕಚೇರಿ ಮುಂದೆ ಗೊಂಬೆಯೊಂದನ್ನು ಕಿಡಿಗೇಡಿಗಳು ನೇತು ಹಾಕಿದ್ದು, ಪಕ್ಷದ ಕಾರ್ಯಕರ್ತರು ವಾಮಾಚಾರದ ಶಂಕೆ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನದ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಈ ಕುರಿತು ಮಾತನಾಡಿದ ಬಿಜೆಪಿ ಮುಖಂಡ ಶರಣು ಅಂಗಡಿ, ‘ಬೆಳಿಗ್ಗೆ ಕಚೇರಿಗೆ ಬಂದಾಗ ಪುಟ್ಟದಾದ ಕಪ್ಪು ಗೊಂಬೆಯೊಂದನ್ನು ಕಚೇರಿ ಮುಂದೆ ತೂಗು ಹಾಕಲಾಗಿತ್ತು. ಇದು ಸಹಜವಾಗಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ. ಈ ಕುರಿತು ಚುನಾವಣಾ ಆಯೋಗ ಹಾಗೂ ಪೊಲೀಸರಿಗೆ ದೂರು ನೀಡಲಾಗುವುದು’ ಎಂದು ತಿಳಿಸಿದರು.