ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಬುಧವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಮಲ್ಯ ಆಸ್ಪತ್ರೆಯಿಂದ ಬಿಡುಗಡೆಯಾಗಿ, ಮನೆಗೆ ತೆರಳಿದರು.
‘ಒಂದು ವಾರ ಬಿಟ್ಟು ತಪಾಸಣೆಗೆ ಬರುವಂತೆ ಅವರಿಗೆ ತಿಳಿಸಲಾಗಿದೆ. ಒಂದು ತಿಂಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆಯೂ ಸಲಹೆ ನೀಡಲಾಗಿದೆ’ ಎಂದು ಮಲ್ಯ ಆಸ್ಪತ್ರೆ ವೈದ್ಯ ಡಾ.ದಿವಾಕರ್ ಭಟ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹೆಚ್ಚು ಮಾತನಾಡುವ ಸಮಯವಲ್ಲ ಇದು. ಮಲ್ಯ ಆಸ್ಪತ್ರೆ ವೈದ್ಯರ ಪ್ರಯತ್ನ ಮತ್ತು ರಾಜ್ಯದ ಜನತೆಯ ಆಶೀರ್ವಾದದಿಂದ ನಾನು ಶೀಘ್ರ ಚೇತರಿಸಿಕೊಂಡಿದ್ದೇನೆ’ ಎಂದು ವಿಶ್ವನಾಥ ಶೆಟ್ಟಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.
ತೇಜ್ರಾಜ್ ಶರ್ಮಾ ಎಂಬಾತ ಲೋಕಾಯುಕ್ತರಿಗೆ ಚೂರಿಯಿಂದ ಇರಿದು ಕೊಲ್ಲಲು ಯತ್ನಿಸಿದ್ದ. ತೀವ್ರ ಗಾಯಗೊಂಡಿದ್ದ ಅವರನ್ನು ಮಾರ್ಚ್ 7ರಂದು ಮಲ್ಯ ಆಸ್ಪತ್ರೆಗೆ
ದಾಖಲಿಸಲಾಗಿತ್ತು.