ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿಯಲ್ಲೂ ರಾಯರಥ ನಗರ ಸಂಚಾರ

Last Updated 6 ಫೆಬ್ರುವರಿ 2018, 6:51 IST
ಅಕ್ಷರ ಗಾತ್ರ

ರಾಯಚೂರು: ವಿವಿಧ ಕಡೆಗಳಿಂದ ರಾಯಚೂರು ನಗರಕ್ಕೆ ರಾತ್ರಿ ತಲುಪುವ ಜನರು, ಸಂಚಾರ ಸೇವೆಯಿಲ್ಲದೆ ತೊಂದರೆ ಅನುಭವಿಸಬಾರದು ಎನ್ನುವ ಸದುದ್ದೇಶದಿಂದ ರಾತ್ರಿಯಲ್ಲೂ ರಾಯರಥ ನಗರ ಸಾರಿಗೆ ಬಸ್‌ ಸೇವೆ ಒದಗಿಸಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಆರ್‌ಟಿಸಿ) ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಪ್ರತಿದಿನ ರಾತ್ರಿಯಿಡೀ ರೈಲ್ವೆ ನಿಲ್ದಾಣ ಆವರಣದಲ್ಲಿ ನಗರ ಸಾರಿಗೆ ಬಸ್‌ಗಳು ಪ್ರಯಾಣಿಕರಿಗಾಗಿ ಕಾದು ನಿಲ್ಲುತ್ತಿವೆ. ಈ ಬಸ್‌ಗಳು ಸಂಚರಿಸುವ ವೇಳಾಪಟ್ಟಿ ಹಾಗೂ ಎಷ್ಟು ಬಸ್‌ಗಳು ರಾತ್ರಿ ನಗರ ಸಾರಿಗೆ ಸೇವೆ ನೀಡುತ್ತಿವೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿಯನ್ನು ಅಧಿಕಾರಿಗಳು ಇನ್ನೂ ಸಿದ್ಧಪಡಿಸಿಲ್ಲ. ಬಸ್‌ ಚಾಲಕರು ಹಾಗೂ ನಿರ್ವಾಹಕರಿಗೂ ಈ ಬಗ್ಗೆ ಅಧಿಕೃತ ವಿವರ ಗೊತ್ತಿಲ್ಲ.

ರಾತ್ರಿಯಲ್ಲಿ ನಗರ ಸಾರಿಗೆ ಬಸ್‌ಗಳು ರೈಲ್ವೆ ನಿಲ್ದಾಣದಿಂದ ಸಂಚಾರ ಆರಂಭಿಸಿ ಐಬಿ, ಆರ್‌ಟಿಒ ಕ್ರಾಸ್‌, ವಾಸವಿನಗರ, ಬೊಳಮಾನ್‌ದೊಡ್ಡಿ ರಸ್ತೆ, ಗಂಜ್‌ನಿಂದ ವಯಾ ರಿಮ್ಸ್‌ ಮೂಲಕ ವಾಪಸ್‌ ಗಂಜ್‌, ಚಂದ್ರಮೌಳೇಶ್ವರ ವೃತ್ತ, ಗಾಂಧಿಚೌಕ್‌, ಬಸವೇಶ್ವರ ವೃತ್ತ, ಕೇಂದ್ರ ಬಸ್‌ ನಿಲ್ದಾಣ, ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ಮೂಲಕ ಮರಳಿ ರೈಲ್ವೆ ನಿಲ್ದಾಣಕ್ಕೆ ಬಸ್‌ ತಲುಪುವಂತೆ ಮಾರ್ಗ ಪಟ್ಟಿ ಮಾಡಲಾಗಿದೆ. ಸದ್ಯಕ್ಕೆ ರಾತ್ರಿ ನಗರ ಸಾರಿಗೆಗಾಗಿ ಎರಡು ಬಸ್‌ಗಳು ಪ್ರಯಾಣಿಕರಿಗೆ ಸಂಚಾರ ಸೇವೆ ಒದಗಿಸುತ್ತಿವೆ.

ರೈಲ್ವೆ ನಿಲ್ದಾಣದಿಂದ ಏಕಕಾಲಕ್ಕೆ ಸಂಚಾರ ಆರಂಭಿಸುವ ಈ ಬಸ್‌ಗಳು ಮಾರ್ಗಪಟ್ಟಿಯಲ್ಲಿ ಉಲ್ಲೇಖಿಸಿದ ತಾಣಗಳಿಗೆ ಪರಸ್ಪರ ವಿರುದ್ಧ ಮಾರ್ಗವಾಗಿ ಸಂಚರಿಸುತ್ತವೆ. ಒಂದು ಬಸ್‌ ಐಬಿ ಕಡೆಯಿಂದ, ಇನ್ನೊಂದು ಅಂಬೇಡ್ಕರ್‌ ವೃತ್ತ, ಕೇಂದ್ರ ಬಸ್‌ ನಿಲ್ದಾಣ ಕಡೆಯಿಂದ ಒಂದು ಸುತ್ತು ಪೂರ್ಣ ಮಾಡಿಕೊಂಡು ವಾಪಸ್‌ ರೈಲ್ವೆ ನಿಲ್ದಾಣಕ್ಕೆ ತಲುಪುತ್ತವೆ. ರಾತ್ರಿಪೂರ್ತಿ ನಗರ ಸಾರಿಗೆ ಬಸ್‌ಗಳು ಜನರಿಗೆ ಸೇವೆ ಒದಗಿಸುತ್ತಿವೆ. ಇನ್ನೊಂದು ಗಮನಾರ್ಹವೆಂದರೆ, ರಾತ್ರಿ ಸಂಚರಿಸುವ ಪ್ರಯಾಣಿಕರು ₹25 ಪ್ರಯಾಣ ಶುಲ್ಕ ಕೊಡಬೇಕು. ಯಾವುದೇ ನಿಲ್ದಾಣದಲ್ಲಿ ಇಳಿದುಕೊಂಡರೂ ₹25 ಕೊಟ್ಟು ಪಾಸ್‌ ಪಡೆದುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.

‘ನಗರದಲ್ಲಿ ರಾತ್ರಿ ಕೂಡಾ ಬಸ್‌ ಸಾರಿಗೆ ಆರಂಭವಾಗಿದೆ ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಹೀಗಾಗಿ ಬಸ್‌ಗಳು ಸಂಪೂರ್ಣ ಭರ್ತಿ ಆಗುತ್ತಿಲ್ಲ. ರೈಲ್ವೆ ನಿಲ್ದಾಣದಿಂದ ಬಸ್‌ ನಿಲ್ದಾಣಕ್ಕೆ ಹೋಗುವವರು ₹25 ಪಾವತಿಸುವುದು ಹೊರೆಯಾಗುತ್ತದೆ ಎನ್ನುತ್ತಿದ್ದಾರೆ. ಆಟೊ ಬಾಡಿಗೆಗಿಂತ ಕಡಿಮೆ ಎನ್ನುವ ಕಾರಣದಿಂದಲೂ ಬಹಳ ಜನರು ಬಸ್‌ಗೆ ಬರುತ್ತಿದ್ದಾರೆ. ಕ್ರಮೇಣ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಬಹುದು’ ಎಂದು ಬಸ್‌ ಚಾಲಕರು ಮತ್ತು ನಿರ್ವಾಹಕರು ಹೇಳುವ ಮಾತಿದು.

ಬೆಂಗಳೂರು ಮಹಾನಗರದಲ್ಲಿ ಬಿಎಂಟಿಸಿ ಕೂಡಾ ರಾತ್ರಿ ನಗರ ಸಾರಿಗೆ ಆರಂಭಿಸಿ ಯಶಸ್ವಿಯಾಗಿದೆ. ಅದೇ ಮಾದರಿಯನ್ನು ರಾಯಚೂರಿನಲ್ಲಿಯೂ ಎನ್‌ಇಕೆಆರ್‌ಟಿಸಿ ಜಾರಿಮಾಡಲು ಯೋಜಿಸಿದೆ. ನಗರ ಬಸ್‌ ಸಾರಿಗೆ ಸೇವೆಯನ್ನು ರಾತ್ರಿ ವಿಸ್ತರಣೆ ಮಾಡು ವುದರಿಂದಾಗುವ ಲಾಭ, ನಷ್ಟದ ಲೆಕ್ಕಾಚಾರವನ್ನು ರಾಯಚೂರು ಎನ್‌ಇ ಕೆಆರ್‌ಟಿಸಿ ವಿಭಾಗೀಯ ಅಧಿಕಾರಿಗಳು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ, ರಾತ್ರಿಯಲ್ಲೂ ರಾಯರಥ ನಗರ ಸಾರಿಗೆ ಸೇವೆ ಕಾಯಂ ಮುಂದುವರಿಸುವ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.

‘ಉಳ್ಳವರು ಸ್ವಂತ ವಾಹನಗಳಲ್ಲಿ ಅಥವಾ ಆಟೊಗಳಲ್ಲಿ ಸಂಚರಿಸುತ್ತಾರೆ. ಆದರೆ ಬಡವರು ಮತ್ತು ಮಧ್ಯಮ ವರ್ಗದ ಜನರು ತಡರಾತ್ರಿಯಲ್ಲಿ ಬಸ್‌ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಿಂದ ಮನೆ ತಲುಪಲು ಹರಸಾಹಸ ಪಡುತ್ತಾರೆ. ಆಟೊ ಚಾಲಕರು ಕೇಳಿದಷ್ಟು ಹಣ ಕೊಡುವುದಕ್ಕೆ ಎಲ್ಲರಿಗೂ ಸಾಧ್ಯ ಆಗುವುದಿಲ್ಲ. ಕೆಲವು ಜನರು ರಾತ್ರಿ ಅಟೊಗಳಲ್ಲಿ ಹೋಗುವುದಕ್ಕೆ ಭಯ ಪಡುತ್ತಾರೆ. ಸುರಕ್ಷತೆ ದೃಷ್ಟಿಯಿಂದ ಮತ್ತು ಸೇವೆಯಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲು ರಾತ್ರಿ ನಗರ ಸಾರಿಗೆ ಬಸ್‌ ಸೇವೆಯನ್ನು ಶಾಶ್ವತವಾಗಿ ಜಾರಿ ಮಾಡಬೇಕು’ ಎನ್ನುವುದು ಯುವ ಕವಿ ಈರಣ್ಣ ಬೆಂಗಾಲಿ ಅವರ ಅಭಿಮತ.

* * 

ರಾತ್ರಿ ಬಸ್‌ ಸೇವೆ ಆರಂಭ ಮಾಡುವುದರಿಂದ ಬಡ ಹಾಗೂ ಮಾಧ್ಯಮ ವರ್ಗದ ಜನರು ಪ್ರತಿನಿತ್ಯ ರೈಲ್ವೆ ನಿಲ್ದಾಣದಲ್ಲಿ ತಾಪತ್ರಯ ಅನುಭವಿಸುವುದು ತಪ್ಪುತ್ತದೆ.
ಈರಣ್ಣ, ಬೆಂಗಾಲಿ ಯುವ ಕವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT