ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಯಾರು ಯಾವಾಗ ಪಕ್ಷಾಂತರ ಮಾಡುತ್ತಾರೆ ಎಂದು ಹೇಳುವಂತಿಲ್ಲ. ಹಲವಾರು ವರ್ಷಗಳಿಂದ ಒಂದೇ ಪಕ್ಷದಲ್ಲಿದ್ದಾತ ಟಿಕೆಟ್ ಸಿಗಲಿಲ್ಲ ಎಂದಾಕ್ಷಣ ಇನ್ನೊಂದು ಪಕ್ಷಕ್ಕೆ ಹಾರುತ್ತಾನೆ. ತಾನಿದ್ದ ಹಿಂದಿನ ಪಕ್ಷವನ್ನು ಟೀಕಿಸತೊಡಗುತ್ತಾನೆ. ಅಲ್ಲೂ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎನ್ನುತ್ತಾನೆ. ಕೆಲವು ಸ್ವಾಮೀಜಿಗಳೂ ಇದಕ್ಕೆ ಹೊರತಲ್ಲ.
ಚುನಾವಣೆ ಬಂದಾಕ್ಷಣ ಒಬ್ಬ ಅಭ್ಯರ್ಥಿ ಇನ್ನೊಬ್ಬ ಅಭ್ಯರ್ಥಿಯ ಪೂರ್ವ ಇತಿಹಾಸವನ್ನು ಜಾಲಾಡುವ ಮೂಲಕ ಜನರಿಗೆ ಮನರಂಜನೆ ಒದಗಿಸುತ್ತಾನೆ. ವಯೋವೃದ್ಧರೂ ಕೊನೆಯುಸಿರು ಇರುವ ತನಕ ಕುರ್ಚಿಗಾಗಿ ಕಾದಾಡುತ್ತಾರೆ. ಒಟ್ಟಿನಲ್ಲಿ ಮತದಾರ ಜಾಗೃತನಾಗಬೇಕಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅರ್ಹ ಅಭ್ಯರ್ಥಿ ಆರಿಸಿ ಬರಬೇಕಾಗಿದೆ.
–ಪಿ. ಜಯವಂತ ಪೈ, ಕುಂದಾಪುರ
ಕ್ರೂರ ರಾಜಕೀಯ
ಮಾರ್ಚ್ 24ರ ‘ಪ್ರಜಾ ಮತ’ದ ‘ಕೇಳಿದ್ದು ನೋಡಿದ್ದು’ ಅಂಕಣದಲ್ಲಿ (‘ಪಾಟೀಲ್ಗೆ ಎದಿರೇಟು’) ವೀರೇಂದ್ರ ಪಾಟೀಲರಿಗೆ ಆದ ಅನ್ಯಾಯ ಓದಿ ಅತೀವ ವೇದನೆಯಾಯಿತು. ರಾಜಕೀಯ ಎನ್ನುವುದು ಎಷ್ಟೊಂದು ಕ್ರೂರ ಅಲ್ಲವೇ?
1989ರಲ್ಲಿ ವೀರೇಂದ್ರ ಪಾಟೀಲರ ನಾಯಕತ್ವದಿಂದಲೇ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಅವಧಿ ಪೂರ್ಣಗೊಳಿಸಲು ಅವರಿಗೆ ಅವಕಾಶ ನೀಡದೇ ಇದ್ದದ್ದು ದುರಂತ. ಇದು ರಾಜೀವ್ ಗಾಂಧಿ ಅವರ ಅಪ್ರಬುದ್ಧ ರಾಜಕಾರಣಕ್ಕೆ ಹಿಡಿದ ಕನ್ನಡಿಯಾಗಿದೆ.
–ಗುರು ಜಗಳೂರು, ಹರಿಹರ
ನಮ್ಮ ಕರ್ತವ್ಯ!
ರಾಜಕೀಯ ರಾಕ್ಷಸ ಇದ್ದಂತೆ ಭರವಸೆಗಳನ್ನು ನೀಡುವುದೇ ಇವರ ಕೆಲಸವಂತೆ ಚುನಾವಣೆಯಲ್ಲಿ ಗೆಲ್ಲುವುದೇ ಅವರ ಗುರಿಯಂತೆ.
ಮೋಸ ವಂಚನೆ ಇವೆರಡೂ ಇವರ ದೋಸ್ತಿಗಳಂತೆ, ಜನರ ಕಷ್ಟಗಳಿಗೂ ಇವರಿಗೂ ಸಂಬಂಧವಿಲ್ಲವಂತೆ, ಇವರಿಗೆಲ್ಲಾ ಮತ ನೀಡುವುದು ನಮ್ಮೆಲ್ಲರ ಕರ್ತವ್ಯವಂತೆ!