ಇಳಕಲ್ (ಬಾಗಲಕೋಟೆ): ‘ಹುನಗುಂದ ತಾಲ್ಲೂಕನ್ನು ದುರಾಡಳಿತ ಕೊನೆಗಾಣಿಸಲು ಬಿಜೆಪಿಗೆ ಮತ ನೀಡಿ’ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮನವಿ ಮಾಡಿದರು.
ಇಲ್ಲಿನ ವೀರಮಣಿ ಕ್ರೀಡಾಂಗಣದಲ್ಲಿ ಶನಿವಾರ ಪಕ್ಷದ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
‘ಕಳೆದ ಐದು ವರ್ಷಗಳ ಅವಧಿಯಲ್ಲಿ ತಾಲ್ಲೂಕಿನಲ್ಲಿ 300ಕ್ಕೂ ಹೆಚ್ಚು ಗ್ರಾನೈಟ್ ಪಾಲಿಶಿಂಗ್ ಫ್ಯಾಕ್ಟರಿಗಳು ಮುಚ್ಚಿವೆ. ಯುವಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಕಲ್ಲು,ಮಣ್ಣು, ಮರಳಿನ ಲೂಟಿ ಅವ್ಯಾಹತವಾಗಿ ನಡೆದಿದೆ’ ಎಂದು ಆರೋಪಿಸಿದರು.
‘ಕ್ಷೇತ್ರದಲ್ಲಿ ಗೂಂಡಾ ಸಂಸ್ಕೃತಿ ನೆಲೆಗೊಂಡಿದೆ. ದುರಾಡಳಿತ, ದುರಹಂಕಾರ ಮಿತಿಮೀರಿದೆ. ಅದನ್ನು ಕೊನೆಗಾಣಿಸಲು ಬಿಜೆಪಿಗೆ ಅವಕಾಶ ನೀಡಿ. ಕೇಂದ್ರದಲ್ಲಿ ಕಳೆದ ನಾಲ್ಕು ವರ್ಷ ಸಾಕಷ್ಟು ಕೆಲಸ ಮಾಡಿದ್ದೇವೆ. ದುಡಿದಿದ್ದೇವೆ. ಕೂಲಿ ಕೊಡಿ’ ಎಂದರು.
‘ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕೆಲಸಗಳು ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದೆ. 48 ತಿಂಗಳ ಅಧಿಕಾರಾವಧಿಯಲ್ಲಿ ಅವರು, ರೈತರು, ಜನಸಾಮಾನ್ಯರಿಗೆ ಹೆಚ್ಚಿನ ನೆರವು ನೀಡಿದ್ದಾರೆ’ ಎಂದು ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತನಾಡಿ, ‘ಕಾಂಗ್ರೆಸ್ ಮುಕ್ತ ಭಾರತಕ್ಕೆ ಇಡೀ ದೇಶ ನಿರ್ಣಯ ಕೈಗೊಂಡಿದೆ. ಅದರ ಫಲವಾಗಿ 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 13 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಬಿಜೆಪಿ ತನ್ನ ಪ್ರಾಬಲ್ಯ ಸ್ಥಾಪಿಸಿದೆ. ಕರ್ನಾಟಕದಲ್ಲೂ ಅದು ಮುಂದುವರೆಯಬೇಕು’ ಎಂದು ಹೇಳಿದರು.
ಶಾಸಕ ಲಕ್ಷ್ಮಣ ಸವದಿ, ಮುಖಂಡರಾದ ಜಿ.ಪಿ.ಪಾಟೀಲ, ಮನೋಹರ ಶಿರೋಳ ಮತ್ತಿತರರು ಪಾಲ್ಗೊಂಡಿದ್ದರು.
ಅರ್ಧ ಗಂಟೆಯಲ್ಲಿ ಮುಗಿದ ಕಾರ್ಯಕ್ರಮ: ಕೂಡಲಸಂಗಮದಿಂದ ನೇರ ಇಳಕಲ್ ಹೆಲಿಪ್ಯಾಡ್ಗೆ ಬಂದ ಅಮಿತ್ ಶಾ, ಅಲ್ಲಿಂದ ದೊಡ್ಡನಗೌಡ ಪಾಟೀಲ ಮನೆಗೆ ತೆರಳಿದರು. ಅಲ್ಲಿ ಕೆಲ ಹೊತ್ತು ಮುಖಂಡರೊಂದಿಗೆ ಚರ್ಚೆ ನಡೆಸಿ ನೇರವಾಗಿ ಸಮಾರಂಭದ ವೇದಿಕೆಗೆ ಬಂದರು.
ಮಧ್ಯಾಹ್ನ 12ರ ರಣ ಬಿಸಿಲಿನಲ್ಲಿ ನೆರೆದಿದ್ದ ಸಾವಿರಾರು ಮಂದಿ ಝಳಕ್ಕೆ ತತ್ತರಿಸಿದರು. ಇಲ್ಲಿ ಸೇರಿದ 10ರಿಂದ 15 ಸಾವಿರ ಮಂದಿ ಮತ ಹಾಕಿದರೆ ಬಿಜೆಪಿ ಗೆಲ್ಲುವುದಿಲ್ಲ. ಬದಲಿಗೆ ಪ್ರತಿಯೊಬ್ಬರೂ ಮನೆಗೆ ತೆರಳಿದ ನಂತರ ತಲಾ 50 ಮಂದಿಗೆ ಫೋನ್ ಕರೆ ಮಾಡಿ ಮನವೊಲಿಸಿ ಪಕ್ಷಕ್ಕೆ ವೋಟು ಹಾಕಿಸುವಂತೆ ಅಮಿತ್ ಶಾ ಮನವಿ ಮಾಡಿದರು.
ಅರ್ಧ ಗಂಟೆಯಲ್ಲಿ ಮುಗಿದ ಕಾರ್ಯಕ್ರಮ
ಕೂಡಲಸಂಗಮದಿಂದ ನೇರ ಇಳಕಲ್ ಹೆಲಿಪ್ಯಾಡ್ಗೆ ಬಂದ ಅಮಿತ್ ಶಾ, ಅಲ್ಲಿಂದ ದೊಡ್ಡನಗೌಡ ಪಾಟೀಲ ಮನೆಗೆ ತೆರಳಿದರು. ಅಲ್ಲಿ ಕೆಲ ಹೊತ್ತು ಮುಖಂಡರೊಂದಿಗೆ ಚರ್ಚೆ ನಡೆಸಿ ನೇರವಾಗಿ ಸಮಾರಂಭದ ವೇದಿಕೆಗೆ ಬಂದರು. ಮಧ್ಯಾಹ್ನ 12ರ ರಣ ಬಿಸಿಲಿನಲ್ಲಿ ನೆರೆದಿದ್ದ ಸಾವಿರಾರು ಮಂದಿ ಝಳಕ್ಕೆ ತತ್ತರಿಸಿದರು. ಇಲ್ಲಿ ಸೇರಿದ 10ರಿಂದ 15 ಸಾವಿರ ಮಂದಿ ಮತ ಹಾಕಿದರೆ ಬಿಜೆಪಿ ಗೆಲ್ಲುವುದಿಲ್ಲ. ಬದಲಿಗೆ ಪ್ರತಿಯೊಬ್ಬರೂ ಮನೆಗೆ ತೆರಳಿದ ನಂತರ ತಲಾ 50 ಮಂದಿಗೆ ಫೋನ್ ಕರೆ ಮಾಡಿ ಮನವೊಲಿಸಿ ಪಕ್ಷಕ್ಕೆ ವೋಟು ಹಾಕಿಸುವಂತೆ ಅಮಿತ್ ಶಾ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.