ಬೆಂಗಳೂರು: ಸಾಹಿತಿ ಚಂದ್ರಕಾಂತ ಪೋಕಳೆ ಅವರು ಇಡೀ ಬದುಕನ್ನೇ ಮರಾಠಿ ಸಾಹಿತ್ಯದ ಅನುವಾದಕ್ಕೆ ಮೀಸಲು ಮಾಡಿ ನಿರಂತರವಾಗಿ ಕೆಲಸ ಮಾಡಿಕೊಂಡು ಬಂದಿರುವಂತಹ ವ್ಯಕ್ತಿ ಎಂದು ಸಾಹಿತಿ ಎಚ್.ಎಸ್. ವೆಂಕಟೇಶ ಮೂರ್ತಿ ಹೇಳಿದರು.
ಅಂಕಿತ ಪುಸ್ತಕ ಮತ್ತು ಬುಕ್ ಬ್ರಹ್ಮದ ಆಶ್ರಯದಲ್ಲಿ ವ್ಯಾಸರಾವ್ ನಿಂಜೂರ್ ಅವರ ‘ಎಳೆದ ತೇರು’ ಆತ್ಮಕಥನ ಮತ್ತು ‘ಸಮಗ್ರ ಕಥೆಗಳು’ ಹಾಗೂ ಚಂದ್ರಕಾಂತ ಪೋಕಳೆ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ‘ಸೇತು’ ಕಾದಂಬರಿ ಭಾನುವಾರ ಬಿಡುಗಡೆ ಮಾಡಿ, ‘ರಾಜಕೀಯ ಕಾರಣಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವೆ ಹಗ್ಗಜಗ್ಗಾಟಗಳು ನಡೆಯುತ್ತಿವೆ. ಆದರೆ ಚಂದ್ರಕಾಂತ ಮರಾಠಿ ಕೃತಿಗಳನ್ನು ಕನ್ನಡಕ್ಕೆ ತರುವ ಮೂಲಕ ಒಂದು ಸೇತುವೆ ನಿರ್ಮಾಣ ಮಾಡುತ್ತಿದ್ದಾರೆ. ಇಂತಹವರು ನಿಜವಾಗಿಯೂ ಸಂಸ್ಕೃತಿಯ ರಕ್ಷಕರು. ಅವರು 100ಕ್ಕೂ ಅಧಿಕ ಮರಾಠಿ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ’ ಎಂದರು.