ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಗಲ್ಲಿಗಲ್ಲಿಗಳಲ್ಲಿ ಗಣೇಶ ಸ್ತುತಿ

ಮೋದಕ, ಕಡುಬು ಮಾಡಿ ವಿಘ್ನ ವಿನಾಶಕನಿಗೆ ನೈವೇದ್ಯ
Last Updated 2 ಸೆಪ್ಟೆಂಬರ್ 2022, 4:43 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಭಾದ್ರಪದ ಮಾಸದ ಚೌತಿಯ ದಿನವಾದ ಬುಧವಾರ ಜಿಲ್ಲೆಯಾದ್ಯಂತ ಗಣಪತಿ ಹಬ್ಬವನ್ನು ಸಂಭ್ರಮ, ಸಡಗರ ಮತ್ತು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಗಲ್ಲಿ ಗಲ್ಲಿಗಳಲ್ಲಿ, ಊರು ಕೇರಿಗಳಲ್ಲಿ, ನಗರ, ಪಟ್ಟಣ ಪ್ರದೇಶ ಹೀಗೆ ಎಲ್ಲೆಂದರಲ್ಲಿ ಗಣೇಶೋತ್ಸವ ಸಮಿತಿಗಳು ಪ್ರತಿಷ್ಠಾಪಿಸಿರುವ ವಿಘ್ನ ವಿನಾಶಕನ ಮೂರ್ತಿಗಳಿಗೆ ಬಗೆ ಬಗೆಯ ಪೂಜೆಗಳನ್ನು ಮಾಡಲಾಯಿತು. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಿತಿಗಳು ಹಬ್ಬಕ್ಕೆ ಮೆರಗು ತುಂಬುತ್ತಿವೆ.

ಚಿಕ್ಕಬಳ್ಳಾಪುರ ನಗರದಲ್ಲಿ ಮನೆ ಮನೆಗಳಲ್ಲಿ ಕೂಡ ಗಜವದನನ ಆರಾಧನೆ ಜೋರಿನಿಂದಲೇ ನಡೆಯಿತು. ಬಗೆ ಬಗೆಯಲ್ಲಿ ಮಂಟಪವನ್ನು ನಿರ್ಮಿಸಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಮೋದಕ, ಕಡುಬು ಮಾಡಿ ನೈವೇದ್ಯ ಅರ್ಪಿಸುವ ಜತೆಗೆ ರಜೆಯ ಮೋಜಿನಲ್ಲಿ ನಾಗರಿಕರು ಹಬ್ಬದೂಟವನ್ನು ಸವಿದರು.

ಜನರು ರಾತ್ರಿ ವೇಳೆ ಕುಟುಂಬ ಸಮೇತ ನಗರದ ಗಲ್ಲಿ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿರುವ ವೈವಿಧ್ಯಮಯ ಲಂಬೋದರ ಮೂರ್ತಿಗಳ ದರ್ಶನ ಪಡೆಯಲು ಪ್ರದಕ್ಷಿಣೆ ಹಾಕಿದರು. ಅನೇಕ ಗಣೇಶೋತ್ಸವ ಸಮಿತಿಗಳು ಪ್ರಸಾದದ ವ್ಯವಸ್ಥೆ ಮಾಡಿದ್ದವು.

ಸಿದ್ಧಿ ವಿನಾಯಕ ವರ್ತಕರ ಸಂಘವು ಎಚ್‌.ಎಸ್.ಗಾರ್ಡನ್‌ಗೆ ಸಾಗುವ ದಾರಿಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಗಮನ ಸೆಳೆಯುತ್ತಿದೆ. ತಿರುಪತಿ ದೇವಸ್ಥಾನದ ಮಾದರಿಯಲ್ಲಿ ಮಂಟಪ ನಿರ್ಮಿಸಲಾಗಿದೆ. ವೆಂಕಟರಮಣ ಸ್ವಾಮಿ, ಪದ್ಮಾವತಿ ನಡುವೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಮಂಟಪದ ಎರಡೂ ಬದಿಯಲ್ಲಿಯೂ ಗಣೇಶ ಮತ್ತು ಲಕ್ಷ್ಮಿ ವೆಂಕಟರಮಣ ಸ್ವಾಮಿ ಮೂರ್ತಿಗಳಿವೆ. ಸಂಘದ 16ನೇ ವರ್ಷದ ಗಣೇಶೋತ್ಸವ
ಇದಾಗಿದೆ.

ಧರ್ಮ ಛತ್ರ ರಸ್ತೆಯಲ್ಲಿಸ್ವಾಮಿ ವಿವೇಕಾನಂದ ಫೌಂಡೇಶನ್ ಎಂಟನೇ ವರ್ಷದ ಗಣೇಶೋತ್ಸವ ಹಮ್ಮಿಕೊಂಡಿದೆ. ಇಲ್ಲಿ ಧರ್ಮಸ್ಥಳ ದೇವಸ್ಥಾನ ಮಾದರಿ ಮಂಟಪ ನಿರ್ಮಿಸಿ ಗಣಪತಿ ಪ್ರತಿಷ್ಠಾಪಿಸಲಾಗಿದೆ.

ನಗರದ ಧರ್ಮಛತ್ರದ ರಸ್ತೆಯಲ್ಲಿ ಸ್ವಾಮಿ ವಿವೇಕಾನಂದ ಫೌಂಡೇಷನ್ ವತಿಯಿಂದ ಪ್ರತಿಷ್ಠಾಪಿಸಿರುವ ಅಂಬಾರಿ ಗಣಪತಿ ಎಲ್ಲರ ಆರ್ಕಷಣೆಯ ಕೇಂದ್ರ ಬಿಂದುವಾಗಿದೆ. ಗಣಪಣ ಪ್ರವೇಶದ್ವಾರ ಮನಮೋಹಕವಾಗಿದ್ದು, ಒಳ ಪ್ರವೇಶಿಸಿದರೆ ವಿಶಾಲ ಪ್ರದೇಶದಲ್ಲಿ ಗಣಪತಿಯ ಸುತ್ತಲೂ ಅಷ್ಟ ಗಣಪತಿ ಅವತಾರಗಳು ಗೋಚರಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT