ಚಿಂತಾಮಣಿ: ‘ಕೋವಿಡ್–19 ಪರಿಣಾಮ ಕ್ಷೀರ ಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ನೀಡುತ್ತಿದ್ದ ಹಾಲು ಪೂರೈಕೆ ಸ್ಥಗಿತಗೊಂಡಿದೆ. ಹಾಗಾಗಿ ಒಕ್ಕೂಟಕ್ಕೆ ₹ 15 ಕೋಟಿ ನಷ್ಟವಾಗಿದೆ. ಆದರೂ, ಹಾಲಿನ ದರ ಕಡಿತ ಮಾಡಿಲ್ಲ’ ಎಂದುಕೋಚಿಮುಲ್ ಉಪ ವ್ಯವಸ್ಥಾಪಕ ಎ.ವಿ. ಶಂಕರರೆಡ್ಡಿ ಹೇಳಿದರು.
ನಗರದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಶು ವಿಮೆ ಚೆಕ್ ವಿತರಿಸಿ ಅವರು ಮಾತನಾಡಿದರು.
‘ಸ್ಪರ್ಧಾತ್ಮಕ ಯುಗದ ಮಾರುಕಟ್ಟೆಯಲ್ಲಿ ಗ್ರಾಹಕರು ಗುಣಮಟ್ಟದ ಪದಾರ್ಥಗಳಿಗೆ ಆದ್ಯತೆ ನೀಡುತ್ತಾರೆ. ಹಾಗಾಗಿ, ಉತ್ಪಾದಕರು ಸಹ ಗುಣಮಟ್ಟದ ಹಾಲು ಪೂರೈಸಬೇಕು’ ಎಂದರು.
ಪ್ರೋತ್ಸಾಹಧನಕ್ಕೆ ಅರ್ಜಿ: ‘2019-20ನೇ ಸಾಲಿನಡಿ ಉತ್ತಮ ಅಂಕಗಳನ್ನು ಗಳಿಸಿರುವ ಉತ್ಪಾದಕರ ಮಕ್ಕಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ತಮ್ಮ ವ್ಯಾಪ್ತಿಯ ಸಂಘದ ಕಾರ್ಯದರ್ಶಿಗೆ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಕಾರ್ಯದರ್ಶಿಗಳು ನ. 12ರೊಳಗೆ ಹೆಚ್ಚು ಅಂಕಗಳನ್ನು ಪಡೆದ ಇಬ್ಬರು ವಿದ್ಯಾರ್ಥಿಗಳ ಅರ್ಜಿಗಳನ್ನು ಶಿಬಿರ ಕಚೇರಿಗೆ ನೀಡಬೇಕು’ ಎಂದು ಹೇಳಿದರು.
ಪಶು ಪ್ರಯೋಗಾಲಯದ ಉಪ ವ್ಯವಸ್ಥಾಪಕ ಡಾ.ಎಲ್. ರಾಘವೇಂದ್ರ ಪಶುಗಳ ಚರ್ಮಗಂಟು ರೋಗದ ಕುರಿತು ಮಾಹಿತಿ ನೀಡಿದರು. ವಿಸ್ತರಣಾಧಿಕಾರಿಗಳಾದ ಎಂ.ಎಸ್. ನಾರಾಯಣಸ್ವಾಮಿ, ವೆಂಕಟೇಶಮೂರ್ತಿ, ಕೆ. ನಾರಾಯಣಸ್ವಾಮಿ, ಪ್ರೇಮಕಿರಣ್, ಶಬ್ಬೀರ್, ಉತ್ಪಾದಕರು, ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಜರಿದ್ದರು.