ಚಿಂತಾಮಣಿ: ‘ಮುಸ್ಲಿಂಮರ ಪವಿತ್ರ ಯಾತ್ರಾಸ್ಥಳವಾದ ನಂದಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಮ್ಮಕಾಯಲಹಳ್ಳಿಯ ಹಜರತ್ ಸೈಯದ್ ಜಲಾಲ್ ಖಾಕಿ ಷಾ ಮೌಲಾ ಬಾಬಾ ದರ್ಗಾದ ಹುಂಡಿಯಲ್ಲಿ ₹ 7.69 ಲಕ್ಷ ಸಂಗ್ರಹವಾಗಿದೆ’ ಎಂದು ವಕ್ಫ್ ಬೋರ್ಡ್ ಅಧಿಕಾರಿ ನವೀದ್ ಪಾಷಾ ತಿಳಿಸಿದರು.
ಮುರುಗಮಲ್ಲ ಗ್ರಾಮದ ಕೆನರಾ ಬ್ಯಾಂಕ್ ಅಧಿಕಾರಿಗಳು, ದರ್ಗಾ ಮೇಲ್ವಿಚಾರಕರು ಹಾಗೂ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಹುಂಡಿ ಎಣಿಕೆ ಮಾಡಲಾಗಿದೆ. ಕಳೆದ ವರ್ಷದ ನವೆಂಬರ್ನಲ್ಲಿ ಹುಂಡಿಯನ್ನು ಎಣಿಕೆ ಮಾಡಲಾಗಿತ್ತು. ಆಗ ₹ 11.22 ಲಕ್ಷ ಸಂಗ್ರಹವಾಗಿತ್ತು. ಕೋವಿಡ್-19ನಿಂದ ಈ ವರ್ಷ ಕಡಿಮೆ ಹಣ ಸಂಗ್ರಹವಾಗಿದೆ ಎಂದು ಅಭಿಪ್ರಾಯಪಟ್ಟರು.
ಹಣವನ್ನು ಮುರುಗಮಲ್ಲ ಕೆನರಾ ಬ್ಯಾಂಕ್ನಲ್ಲಿರುವ ದರ್ಗಾ ಖಾತೆಗೆ ಜಮೆ ಮಾಡಲಾಗುತ್ತದೆ. ಹಣವನ್ನು ದರ್ಗಾಗೆ ಬರುವ ಭಕ್ತರಿಗೆ ಮೂಲಸೌಲಭ್ಯ ಒದಗಿಸಲು ಹಾಗೂ ಸಿಬ್ಬಂದಿಯ ವೇತನ, ಮತ್ತಿತರ ಖರ್ಚುಗಳಿಗಾಗಿ ಬಳಸಲಾಗುವುದು. ಈಚೆಗೆ ನಡೆದ ದರ್ಗಾ ಗಂಧೋತ್ಸವದಲ್ಲಿ ಭಕ್ತರಿಗೆ ಎಲ್ಲ ಸೌಲಭ್ಯ ಕಲ್ಪಿಸಲಾಗಿತ್ತು ಎಂದು ಹೇಳಿದರು.
ದರ್ಗಾ ಮೇಲ್ವಿಚಾರಣಾ ಸಮಿತಿಯ ಅವಧಿ ಮುಕ್ತಾಯವಾಗಿದೆ. ನೂತನ ಸಮಿತಿಯನ್ನು ನೇಮಕ ಮಾಡಿ ರಾಜ್ಯ ವಕ್ಫ್ ಬೋರ್ಡ್ಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅಲ್ಲಿಂದ ಅನುಮೋದನೆಯಾಗಿ ಬಂದ ನಂತರ ನೂತನ ಸಮಿತಿ ಅಧಿಕಾರ ವಹಿಸಿಕೊಳ್ಳುತ್ತದೆ.
ದರ್ಗಾ ಕಮಿಟಿಯ ಮಾಜಿ ಕಾರ್ಯದರ್ಶಿ ಜಮೀರ್ ಪಾಷಾ, ಮುರುಗಮಲ್ಲ ದರ್ಗಾ ಮೇಲ್ವಿಚಾರಕ ತಯ್ಯೂಬ್, ಮುಖಂಡರಾದ ನವಾಜ್, ಅಲ್ತಾಫ್, ದಾದಾಫೀರ್, ಬಟ್ಲಹಳ್ಳಿ ಪೊಲೀಸ್ ಠಾಣೆಯ ವಿಜಯಕುಮಾರ್, ಮೌಲಾ ಆಲಿ, ಸಾದಿಕ್ ಇದ್ದರು.