ಚಿಕ್ಕಬಳ್ಳಾಪುರ: ನೆರೆ ಸಂತ್ರಸ್ತರ ನೆರವಿಗಾಗಿ ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಡಳಿತ ಸಹಯೋಗದಲ್ಲಿ ಜಿಲ್ಲೆಯಲ್ಲಿ ₹50.14 ಲಕ್ಷ ದೇಣಿಗೆ ಸಂಗ್ರಹಿಸಲಾಗಿದೆ. ಈ ಮೊತ್ತವನ್ನು ಶೀಘ್ರವೇ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಲ್ಲಿಸಲು ನಿರ್ಧರಿಸಲಾಗಿದೆ.
ಆ.15 ರಂದು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು ಅವರವರ ಪಟ್ಟಣ, ನಗರಸಭೆ, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಂಚರಿಸಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಜಿಲ್ಲಾಡಳಿತ ಮನವಿ ಮಾಡಿತ್ತು.
ಎರಡು ದಿನ ದೇಣಿಗೆ ಸಂಗ್ರಹಿಸಿದ ಪೆಟ್ಟಿಗೆಗಳನ್ನು ಆ.17 ರಂದು ಜಿಲ್ಲಾಡಳಿತದ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿ ಮತ್ತು ಸಿಇಒ ಅವರ ಸಮ್ಮುಖದಲ್ಲಿ ತೆರೆದು ಏಣಿಕೆ ಮಾಡಲಾಗಿತ್ತು.
ದೇಣಿಗೆ ಸಂಗ್ರಹದಿಂದ ಒಟ್ಟು ₹32.56 ಲಕ್ಷ ಸಂಗ್ರಹವಾಗಿತ್ತು. ಜತೆಗೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಸ್ವಂತ ಸಂಪನ್ಮೂಲಗಳಿಂದ ಚೆಕ್, ಡಿಡಿಗಳ ಮೂಲಕ ₹17.85 ಲಕ್ಷ ದೇಣಿಗೆ ಸೇರಿಸಲಾಗಿತ್ತು.
ದೇಣಿಗೆಯಲ್ಲಿ ಸಂಗ್ರಹವಾದ ಹಣವನ್ನು ಬ್ಯಾಂಕ್ ಶಾಖೆಯೊಂದಕ್ಕೆ ಜಮಾ ಮಾಡಿ ಅಷ್ಟು ಮೊತ್ತದ ಡಿಡಿ ಪಡೆಯಾಗಿದೆ. ಮುಖ್ಯಮಂತ್ರಿ ಅವರ ಸಮಯಾವಕಾಶ ಪಡೆದು ನಿಯೋಗದೊಂದಿಗೆ ತೆರಳಿ ದೇಣಿಗೆ ಮೊತ್ತದ ಚೆಕ್, ಡಿಡಿಗಳನ್ನು ಹಸ್ತಾಂತರಿಸಲು ಉದ್ದೇಶಿಸಲಾಗಿದೆ.