ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಕಟ ಸ್ಪರ್ಧೆ: ಪಟ್ಟು ಬಿಡದ ಅಭ್ಯರ್ಥಿಗಳು

ಮತ ಧ್ರುವೀಕರಣಕ್ಕೆ ತರಹೇವಾರಿ ಕಸರತ್ತು: ಬಿ.ಸಿ.ಪಾಟೀಲ– ಯು.ಬಿ. ಬಣಕಾರರ ನಡುವೆ ಫೈಟ್
Last Updated 9 ಮೇ 2018, 12:21 IST
ಅಕ್ಷರ ಗಾತ್ರ

ಹಾವೇರಿ: ಮಲೆನಾಡಿನ ಸೆರಗಿನಂತಿರುವ ಹಿರೇಕೆರೂರ ಕ್ಷೇತ್ರದಲ್ಲಿ 1972ರ ಬಳಿಕ 10 ಸಾವಿರಕ್ಕಿಂತ ಅಧಿಕ ಮತದಲ್ಲಿ ಯಾವುದೇ ಅಭ್ಯರ್ಥಿ ಗೆದ್ದ ಇತಿಹಾಸ ಇಲ್ಲ. 2004ರ ನಂತರ ಇಲ್ಲಿ ಮಾಜಿ ಶಾಸಕ ಬಿ.ಸಿ. ಪಾಟೀಲ್‌ ಮತ್ತು ಶಾಸಕ ಯು.ಬಿ. ಬಣಕಾರರ ನೇರ ಮುಖಾಮುಖಿ. ಅದರೆ, ಗೆಲುವಿನ ಅಂತರವು 5 ಸಾವಿರ ಮತಗಳನ್ನು ದಾಟಿಲ್ಲ. ಈ ಬಾರಿಯೂ ಕಾಂಗ್ರೆಸ್‌ನಿಂದ ಪಾಟೀಲ ಹಾಗೂ ಬಿಜೆಪಿಯಿಂದ ಬಣಕಾರ ಅಭ್ಯರ್ಥಿಗಳು.

ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟುಕೊಂಡು ಪಾಟೀಲರು ಪ್ರಚಾರ ನಡೆಸುತ್ತಿದ್ದರೆ, ನೇರ ಜನ ಸಂಪರ್ಕ, ಪಕ್ಷ, ಯಡಿಯೂರಪ್ಪ ಹಾಗೂ ನರೇಂದ್ರ ಮೋದಿ ಪ್ರಭಾವದ ಭರವಸೆಯಲ್ಲಿ ಬಣಕಾರ ಮತಯಾಚಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ಲಿಂಗಾಯತರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರೇ ಹೆಚ್ಚಾಗಿ ಈ ತನಕ ಪ್ರತಿನಿಧಿಸಿದ್ದಾರೆ. ಈ ಬಾರಿಯೂ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಬ್ಬರೂ ಲಿಂಗಾಯತ ಸಾದರ ಒಳಪಂಗಡಕ್ಕೆ ಸೇರಿದವರು. ಹೀಗಾಗಿ, ‘ಬ್ರಾಂಡ್’ ಫೈಟ್ ಜೋರಾಗಿಲ್ಲ. ಆದರೂ, ಇತರ ಒಳಪಂಗಡಗಳ ಮತ ಸೆಳೆಯಲು ವಿಭಿನ್ನ ಕಸರತ್ತುಗಳು ನಡೆಯುತ್ತಿವೆ.

ಜಿಲ್ಲೆಯಲ್ಲೇ ಮೊದಲ ಬಾರಿಗೆ (1994)ಬಿಜೆಪಿಯು ಇಲ್ಲಿ ಖಾತೆ ತೆರೆದಿದ್ದು, ರಟ್ಟೀಹಳ್ಳಿ ಭಾಗದಲ್ಲಿರುವ ಆರ್ಎಸ್‌ಎಸ್ ಸಂಘಟನೆಯ ತಳಹದಿಯೇ ಮುಖ್ಯ ಕಾರಣ ಎಂಬುದು ಹಿರಿಯ ಮುಖಂಡರೊಬ್ಬರ ಅಭಿಪ್ರಾಯ. ಅಲ್ಲದೇ, ‘ಹಿಂದುತ್ವ ರಾಜಕಾರಣ’ದ ತಳಹದಿಯನ್ನು ವಿಸ್ತರಿಸಲು ಪ್ರಯತ್ನಗಳು ಸಾಗುತ್ತಲೇ ಇವೆ. ಇನ್ನೊಂದೆಡೆ, ‘ಪ್ರತ್ಯೇಕ ಲಿಂಗಾಯತ ಧರ್ಮ’ ವಿಚಾರದ ಲಾಭ ಪಡೆಯಲು ಎರಡೂ ಪಕ್ಷಗಳು ವಿಭಿನ್ನವಾಗಿ ಪ್ರಯತ್ನಿಸುತ್ತಿವೆ.

ಸಜ್ಜನ–ಸರಳ ಎಂಬುದು ಯು.ಬಿ. ಬಣಕಾರರಿಗೆ ವರವಾದರೆ, ಕೆಲಸದ ಛಾತಿ ಮತ್ತು ವರ್ಚಸ್ಸಿನ ಶೈಲಿಯು ಬಿ.ಸಿ.ಪಾಟೀಲರಿಗೆ ನಾಯಕತ್ವ ರೂಪಿಸಿದೆ. ಮೋದಿ ಅಲೆಯನ್ನು ಬಳಸಿಕೊಂಡು ಯುವ ಮತದಾರರ ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಟರು, ಯುವ ಮುಖಂಡರು, ಜನಪ್ರಿಯ ವ್ಯಕ್ತಿಗಳನ್ನು ಪ್ರಚಾರದಲ್ಲಿ ತೊಡಗಿಸಿದೆ.

‘ಕಳೆದ ಬಾರಿ ಯು.ಬಿ. ಬಣಕಾರ ಕೆಜೆಪಿಯಿಂದ ಸ್ಪರ್ಧಿಸಿದ್ದರು. ಆಗ, ‘ಬಿಜೆಪಿಯಿಂದ ಹೊರಬಂದಿದ್ದಾರೆ’ ಎಂಬ ಕಾರಣಕ್ಕೆ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪಂಗಡದವರು ಕೆಜೆಪಿ ಬೆಂಬಲಿಸಿದ್ದರು. ಆದರೆ, ಬಣಕಾರ ಬಿಜೆಪಿ ಸೇರಿರುವುದು ಹಾಗೂ ಬಿಜೆಪಿ ಸಚಿವರೊಬ್ಬರು ‘ಸಂವಿಧಾನ ಬದಲಾವಣೆ’ಯನ್ನು ಪ್ರಸ್ತಾಪಿಸಿರುವ ಕಾರಣ ಜಾತ್ಯತೀತ ಮತಗಳು ಮತ್ತೆ ಕಾಂಗ್ರೆಸ್‌ನತ್ತ ಬರಲಿವೆ’ ಎಂಬುದು ಪಾಟೀಲ ಹಾಗೂ ಬೆಂಬಲಿಗರ ವಾದ. ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

ಇತ್ತ ಬಿಜೆಪಿಯು ಹಿಂದುತ್ವ ಹಾಗೂ ಮೋದಿ ಅಭಿಮಾನಿ ಮತಗಳನ್ನು ಕ್ರೋಡೀಕರಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಕರೆಯಿಸಿಕೊಂಡಿದೆ. ‘ಯುವ ಮತದಾರರು ಮೋದಿ ಬಗ್ಗೆ ಆಕರ್ಷಣೆ ಹೊಂದಿರುವುದು ನಮಗೆ ಪೂರಕವಾಗಿದೆ’ ಎಂದು ಬಣಕಾರ ತಿಳಿಸಿದರು.

ಅಭ್ಯರ್ಥಿ, ಪಕ್ಷದ ಮತಗಳ ಜೊತೆ ಸಿದ್ದರಾಮಯ್ಯ ಅಭಿಮಾನಿಗಳ ಮತದ ಮೇಲೂ ಕಾಂಗ್ರೆಸ್‌ ಕಣ್ಣಿಟ್ಟಿದೆ. ಜೆಡಿಎಸ್‌ನಿಂದ ಕುರುಬ ಸಮಾಜದ ಸಿದ್ದಪ್ಪ ಗುಡದಪ್ಪನವರ ಕಣದಲ್ಲಿದ್ದು, ಫಲಿತಾಂಶದ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಚರ್ಚೆ ಹೆಚ್ಚಾಗಿದೆ.

ರಟ್ಟೀಹಳ್ಳಿ ತಾಲ್ಲೂಕು ರಚನೆ, ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ, ಮದಗ ದುರ್ಗಾದೇವಿ ಕೆರೆಗೆ ಕುಮುದ್ವತಿಯಿಂದ ನೀರು, 72 ಹಳ್ಳಿಗಳಿಗೆ ಏತ ನೀರಾವರಿ ನೀರು, ಬಗರ್‌ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಅರಣ್ಯ ಒತ್ತುವರಿ, ರೈತರ ಸಮಸ್ಯೆಗಳೂ ಅಲ್ಪ ಪ್ರಮಾಣದ ಪ್ರಭಾವ ಬೀರಬಹುದು.

‘ಕ್ಷೇತ್ರದ ಅಭಿವೃದ್ಧಿ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಪ್ರಭಾವವೂ ಮುಖ್ಯವಾಗಿದೆ. ಈ ತನಕ ಉದ್ಯೋಗ ಸೃಷ್ಟಿ, ಖಾತೆಗೆ ಹಣ, ಕಪ್ಪು ಹಣದ ಭರವಸೆ ಈಡೇರದಿದ್ದರೂ, ಭವಿಷ್ಯದಲ್ಲಿ ಈಡೇರಿಸಬಹುದು ಎಂಬ ನಿರೀಕ್ಷೆ ಇದೆ’ ಎಂದು ಮಾಸೂರಿನ ಸಂದೀಪ್ ಎಚ್. ಅಭಿಪ್ರಾಯ ಪಟ್ಟರು.

‘ಮೋದಿ ಭಾಷಣ ಮತ್ತು ಭರವಸೆ ಬಿಟ್ಟರೆ, ಬೇರೇನು ಕೆಲಸ ಮಾಡುತ್ತಿಲ್ಲ. ರಾಜ್ಯಕ್ಕೆ ಏನು ಕೊಟ್ಟಿದ್ದಾರೆ ಎಂದೂ ಹೇಳುತ್ತಿಲ್ಲ. ಆದರೆ, ಸಿದ್ದರಾಮಯ್ಯ ಸರ್ಕಾರದ ಕೊಡುಗೆಗಳ ಕಾರಣ ಕ್ಷೇತ್ರ ಅಭಿವೃದ್ಧಿ ಕಾಣುತ್ತಿದೆ. ಪೊಳ್ಳು ಭರವಸೆಗಿಂತ, ಬದುಕು ಮತ್ತು ಅಭಿವೃದ್ಧಿ ಮುಖ್ಯ’ ಎಂದು ರಟ್ಟೀಹಳ್ಳಿಯ ಯೂಸುಫ್ ಮಲ್ಲಳ್ಳಿ ತಿಳಿಸಿದರು.

‘ರಾಜಕೀಯದ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ. ನಾನು, ವೈಯಕ್ತಿಕವಾಗಿ ಮೋದಿ ಅಭಿಮಾನಿ. ಅಂದ ಮಾತ್ರಕ್ಕೆ ಬಿಜೆಪಿಗೆ ಮತ ಹಾಕಬೇಕು ಎಂದಿಲ್ಲ. ಏಕೆಂದರೆ, ನಾನು ಕಾಂಗ್ರೆಸಿಗ. ಸಹಜವಾಗಿ ರಾಜ್ಯ, ಕ್ಷೇತ್ರದ ಅವಶ್ಯಕತೆಗೆ ತಕ್ಕಂತೆ ಮತ ಚಲಾವಣೆ ಆಗುತ್ತದೆ’ ಎಂದು ಹಿರೇಕೆರೂರಿನ ಡಾ.ಕೆ.ವಿ.ಹಳಕಟ್ಟಿ ಮಾರ್ಮಿಕವಾಗಿ ತಿಳಿಸಿದರು. ಹೀಗೆ ಹಲವರನ್ನು ಮಾತನಾಡಿಸಿದಾಗ ಕ್ಷೇತ್ರದಲ್ಲಿ ಕಠಿಣ ಸ್ಪರ್ಧೆಯ ಮುನ್ಸೂಚನೆ ಕಂಡು ಬಂತು.

ಕ್ಷೇತ್ರದ ಮತದಾರರ ವಿವರ
ಪುರುಷ– 91,451
ಮಹಿಳೆ–84,505
ಒಟ್ಟು– 1,75,956

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT