ಚಿಕ್ಕಬಳ್ಳಾಪುರ: ಸರ್.ಎಂ.ವಿಶ್ವೇಶ್ವರಯ್ಯ ಅವರು ನಡೆದಾಡಿದ ಈ ಪ್ರದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳೇ ಧನ್ಯರು. ಜಿಲ್ಲೆಯ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ಅವರನ್ನು ಮಾದರಿಯಾಗಿ ತೆಗೆದುಕೊಂಡು ಉನ್ನತ ಸಾಧನೆ ಮಾಡಬೇಕು’ ಎಂದು ಕಂದವಾರ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಶಿಕ್ಷಕ ಶ್ರೀನಿವಾಸ್ ಹೇಳಿದರು.
ಶಾಲೆಯಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಆಯೊಜಿಸಿದ್ದ ‘ಶಾಲೆ ಅಂಗಳದಲ್ಲಿ ನುಡಿಸಿರಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಉತ್ತಮ ಕನಸನ್ನು ಕಟ್ಟಿಕೊಂಡು ಅದನ್ನು ಸಾಧಿಸುವ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ದಿನೇ ದಿನೇ ಕನ್ನಡ ಮಾಧ್ಯಮಮದಲ್ಲಿ ಓದುವ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಇದು ಕಳವಳದ ವಿಚಾರ. ಪೋಷಕರು ಮಾತೃಭಾಷೆಗೆ ಆದ್ಯತೆ ನೀಡುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.
ಉಪನ್ಯಾಸಕ ನಾಗೇಂದ್ರ ಸಿಂಹ ಮಾತನಾಡಿ, ‘ಮನಸ್ಸಿನಲ್ಲಿರುವ ಭಾವನೆಗಳಿಗೆ ಪದಗಳ ರೂಪ ಕೊಟ್ಟಾಗ ಸಾಹಿತ್ಯವಾಗುತ್ತದೆ. ಮಕ್ಕಳಲ್ಲಿ ಚಿಕ್ಕಂದಿನಲ್ಲಿಯೇ ಸಾಹಿತ್ಯದ ಆಸಕ್ತಿ ಬೆಳೆಸಬೇಕು, ಪ್ರತಿಯೊಬ್ಬರಲ್ಲಿ ಒಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಹೊರತರುವ ಕೆಲಸವನ್ನು ಶಿಕ್ಷಕರು ಮಾಡಬೇಕು’ ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಂ.ಭಾಷಾ, ಕೆಪಿಸಿಸಿ ಸದಸ್ಯರಾದ ಶ್ರೀ ಎಸ್.ಪಿ.ಶ್ರೀನಿವಾಸ್, ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶ್, ಎನ್ಎಸ್ಯುಐ ಪದಾಧಿಕಾರಿಗಳಾದ ಮುನೀಂದ್ರ , ಕೃಷ್ಣ, ಕಸಾಪ ಪದಾಧಿಕಾರಿಗಳಾದ ನಾಗಾರ್ಜುನ ,ಚಂದ್ರಶೇಖರ್ ಹಾಜರಿದ್ದರು.