ಚಿಕ್ಕಬಳ್ಳಾಪುರ: ಖರೀದಿದಾರರು ಬರದೆ ತೋಟದಲ್ಲಿ ಕೊಳೆಯುತ್ತಿರುವ ದ್ರಾಕ್ಷಿ ಹಣ್ಣನ್ನು ಗುಡಿಬಂಡೆ ತಾಲ್ಲೂಕಿನ ಹಳೆಗುಡಿಬಂಡೆ ಗ್ರಾಮದ ರೈತ ಹನುಮಂತರೆಡ್ಡಿ ಟ್ರ್ಯಾಕ್ಟರ್ ಮೂಲಕ ಕೆರೆಗೆ ಸುರಿಯುತ್ತಿದ್ದಾರೆ.
ಹನುಮಂತರೆಡ್ಡಿ ಅವರು ಸುಮಾರು ₹9 ಲಕ್ಷ ಖರ್ಚು ಮಾಡಿ ಐದು ಎಕರೆ ದ್ರಾಕ್ಷಿ ಬೆಳೆದಿದ್ದಾರೆ. ಲಾಕ್ಡೌನ್ ಕಾರಣಕ್ಕೆ ಮಾರುಕಟ್ಟೆ ಅಸ್ತವ್ಯಸ್ತಗೊಂಡ ಪರಿಣಾಮ ಖರೀದಿದಾರರು ದ್ರಾಕ್ಷಿ ಖರೀದಿಗೆ ಬರದ ಕಾರಣ ಹಣ್ಣು ತೋಟದಲ್ಲಿ ಕೊಳೆಯಲು ಆರಂಭಿಸಿದೆ.
ಈಗಾಗಲೇ ಹನುಮಂತರೆಡ್ಡಿ ಅವರು ತೋಟದಲ್ಲಿ ಕೊಳೆಯುವ ಸ್ಥಿತಿಗೆ ತಲುಪಿದ ಸುಮಾರು 10 ಟನ್ ದ್ರಾಕ್ಷಿಯನ್ನು ಕಟಾವು ಮಾಡಿ, ಅಮಾನಿ ಬೈರಸಾಗರ ಕೆರೆಗೆ ಸುರಿದು, ದಿಕ್ಕು ತೋಚದೆ ಕಂಗಾಲಾಗಿದ್ದಾರೆ.
'ಸರ್ಕಾರ ದ್ರಾಕ್ಷಿ ಬೆಳೆಗಾರರ ನೆರವಿಗೆ ಧಾವಿಸಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗಾಗಲೇ ಘೋಷಿಸಿದ ಪರಿಹಾರ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿದೆ. ಸಾಲ ಮಾಡಿ ದ್ರಾಕ್ಷಿ ಬೆಳೆದ ರೈತರು ಇದೀಗ ಹತಾಶೆಗೆ ಒಳಗಾಗಿದ್ದಾರೆ. ಸರ್ಕಾರ ದ್ರಾಕ್ಷಿ ಬೆಳೆಗಾರರ ನೆರವಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು‘ ಎಂದು ಹನುಮಂತರೆಡ್ಡಿ ಅವರ ಸಹೋದರ ಲಕ್ಷ್ಮಿನಾರಾಯಣ ಆಗ್ರಹಿಸಿದರು.