ಚಿಕ್ಕಬಳ್ಳಾಪುರ: ‘ನಂದಿ ಗ್ರಾಮ ಮತ್ತು ನಂದಿಬೆಟ್ಟದಲ್ಲಿ ಹಲವು ಸಿನಿಮಾಗಳ ಚಿತ್ರೀಕರಣ ನಡೆದಿದೆ. ನಂದಿಬೆಟ್ಟ ಎಂದರೆ ನಮ್ಮ ತಂದೆ, ಅಪ್ಪು, ನನಗೆ ಮತ್ತು ನಮ್ಮ ಕುಟುಂಬದವರಿಗೆ ಪ್ರೀತಿ ಹೆಚ್ಚು’ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದರು.
ಮೈಸೂರಿನ ಶಕ್ತಿಧಾಮದ ಮಕ್ಕಳ ಜತೆ ಗುರುವಾರ ನಂದಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಅವರುಸುದ್ದಿಗಾರರ ಜತೆ ಮಾತನಾಡಿದರು. ಮಕ್ಕಳ ಜತೆ ಶಿವರಾಜ್ ಕುಮಾರ್ ದಂಪತಿ ಭೋಗ ನಂದೀಶ್ವರ ದೇವಾಲಯ ಹಾಗೂ ನಂದಿಬೆಟ್ಟಕ್ಕೆ ಭೇಟಿ ನೀಡಿದ್ದರು.
ಇದೇ ಮೊದಲ ಬಾರಿಗೆ ಶಕ್ತಿಧಾಮದ ಮಕ್ಕಳು ಬೆಂಗಳೂರಿಗೆ ಬಂದಿದ್ದಾರೆ. ಶುಕ್ರವಾರ ಅವರು ಶಕ್ತಿಧಾಮಕ್ಕೆ ಮರಳುವರು. ನಮ್ಮ ತಂದೆ, ತಾಯಿ ಹಾಗೂ ಹಲವರು ಶಕ್ತಿಧಾಮವನ್ನು ಬೆಳೆಸಿದರು. ನಮಗೆ ಹತ್ತಿರವಾದ ಸಂಸ್ಥೆ ಇದು ಎಂದು ಹೇಳಿದರು.
ಮಕ್ಕಳಿಗೆ ಶಕ್ತಿಧಾಮ ನಮ್ಮ ಮನೆ ಎನ್ನುವ ಭಾವನೆ ಬೆಳೆಸಬೇಕು. ಅವರಿಗೆ ಇದು ನಮ್ಮ ಮನೆ, ನಮ್ಮ ಕುಟುಂಬ ಎನ್ನುವಭಾವನೆ ಬರಬೇಕು. ಮಕ್ಕಳ ಜತೆ ಎಂದಿಗೂ ಇರುತ್ತೇವೆ. ಮಕ್ಕಳನ್ನು ಬರಿ ಓದುವುದಷ್ಟಕ್ಕೆ ಸೀಮಿತಗೊಳಿಸಬಾರದು. ಅವರಲ್ಲಿ ಅರಿವು ಮೂಡಿಸಬೇಕು ಎಂದರು.
ಅಪ್ಪು (ಪುನೀತ್ ರಾಜ್ಕುಮಾರ್) ಇಲ್ಲ ಎನ್ನುವ ನೋವು ಎಂದಿಗೂ ಇರುತ್ತದೆ. ಅಪ್ಪು ಅಮರವಾಗಿ ಇರುತ್ತಾನೆ. ಜೇಮ್ಸ್ ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದೇನೆ. ಅಭಿಮಾನಿಗಳಿಗೆ ಇಷ್ಟವಾಗುತ್ತದೆ ಎಂದುಕೊಂಡಿದ್ದೇನೆ. ಡಬ್ಬಿಂಗ್ ಮಾಡುವಾಗ ಕಷ್ಟವಾಯಿತು ಎಂದರು.
150 ಮಕ್ಕಳು ಮೂರು ಬಸ್ಗಳಲ್ಲಿ ನಂದಿಗೆ ಬಂದಿದ್ದರು. ಭೋಗ ನಂದೀಶ್ವರ ದೇವಾಲಯದಲ್ಲಿ ದರ್ಶನ ಪಡೆದು ನಂದಿಬೆಟ್ಟಕ್ಕೆ ತೆರಳಿದರು.ಗೀತಾ ಶಿವರಾಜ್ ಕುಮಾರ್ ಮತ್ತಿತರರು ಇದ್ದರು.
ಚಿಕ್ಕಬಳ್ಳಾಪುರದ ಭೋಗನಂದೀಶ್ವರ ದೇವಸ್ಥಾನಕ್ಕೆ ಮೈಸೂರಿನ ಶಕ್ತಿಧಾಮದ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋದ ನಟ ಶಿವರಾಜ್ಕುಮಾರ್ ದಂಪತಿ