ಶಿಡ್ಲಘಟ್ಟ: ದಾನಗಳಲ್ಲೇ ಶ್ರೇಷ್ಠವಾದುದು ರಕ್ತದಾನ. ಹಾಗಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸುವ ಕೆಲಸದಲ್ಲಿ ಭಾಗಿಯಾಗಬೇಕು ಎಂದು ಮಾಜಿ ಶಾಸಕ ಎಂ. ರಾಜಣ್ಣ ಹೇಳಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮದಲ್ಲಿ ಗುರುವಾರ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ಸ್ಮರಣಾರ್ಥ ರಾಷ್ಟ್ರೋತ್ಥಾನ ರಕ್ತನಿಧಿ ಹಾಗೂ ಬಿಜೆಪಿ ಗ್ರಾಮಾಂತರ ಮಂಡಲ ವತಿಯಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ ಮಾತನಾಡಿ, ರಕ್ತದಾನ ಮಹಾದಾನ. ಕೊರೊನಾ ಸಮಯದಲ್ಲಿ ಜನರು ಹೊರಬರದೆ ರಕ್ತದಾನಿಗಳ ಕೊರತೆಯಿಂದಾಗಿ ರಕ್ತದ ಕೊರತೆ ಉಂಟಾಗಿದೆ ಎಂದು ಹೇಳಿದರು.
ಜೀವರಕ್ಷಕವಾದ ರಕ್ತವನ್ನು ದಾನ ಮಾಡಲು ಜನರು ಮುಂದೆ ಬರಬೇಕು. ರಕ್ತವನ್ನು ಉತ್ಪಾದನೆ ಮಾಡಲು ಸಾದ್ಯವಿಲ್ಲ. ಇನ್ನೊಬ್ಬರಿಂದ ಪಡೆದೇ ರಕ್ತ ನೀಡಬೇಕು ಎಂದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ. ನಂದೀಶ್, ಬಿಜೆಪಿ ಹಿರಿಯ ಮುಖಂಡರಾದ ದಾಮೋಧರ್, ಸುಜಾತಮ್ಮ, ಕೆ.ಎಸ್. ಕನಕಪ್ರಸಾದ್, ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆಂಜನೇಯಗೌಡ ಇದ್ದರು.