ಬಾಗೇಪಲ್ಲಿ: ‘ಅಸಂಘಟಿತ ಕಟ್ಟಡ ಹಾಗೂ ಇತರೆ ಕಾರ್ಮಿಕರಿಗೆ ಸರ್ಕಾರಗಳು ಅಪಘಾತ ವಿಮೆ, ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು, ಸಾಲ ಸೌಲಭ್ಯ ಕಲ್ಪಿಸಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಬಿ. ಆಂಜನೇಯರೆಡ್ಡಿ ಹೇಳಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸರ್ಕಾರದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪೂರ್ವ ಕಲಿಕೆಯ ತಾಲ್ಲೂಕುಮಟ್ಟದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಎರಡು ಸಾವಿರ ಕಾರ್ಮಿಕರನ್ನುಇಲಾಖೆಯಲ್ಲಿ ನೋಂದಣಿ ಮಾಡಿಸಲಾಗಿದೆ. ಆದರೆ, ಮಂಡಳಿಯಲ್ಲಿ 500 ಮಂದಿ ನೋಂದಣಿ ಮಾಡಿಸಿದ್ದಾರೆ. ಅನೇಕ ಬಾರಿ ಕಾರ್ಮಿಕರಿಗೆ ಬರುವ ಸರ್ಕಾರಿ ಸೌಲಭ್ಯದ ಬಗ್ಗೆ ಜಾಗೃತಿ ಮೂಡಿಸಿ ಪ್ರತಿವರ್ಷ ಸದಸ್ಯತ್ವ ನೋಂದಣಿ ಮಾಡಿಸಬೇಕು ಎಂದರು.
ಕೆಲವರು ಗುರುತಿನ ಚೀಟಿ ಇದ್ದರೂ ನವೀಕರಣ ಮಾಡಿಸಿಲ್ಲ. ಇದರಿಂದ ಸರ್ಕಾರಿ ಸೌಲಭ್ಯ ಸಿಗುವುದಿಲ್ಲ. ನುರಿತ ಎಂಜಿನಿಯರ್ಗಳಿಂದ ಕಾರ್ಮಿಕರಿಗೆ ಒಂದು ದಿನದ ತರಬೇತಿ ನೀಡಲಾಗುತ್ತಿದೆ. ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸಂಚಾಲಕ ರತ್ನಪ್ಪ ಮಾತನಾಡಿ, ರಾಜ್ಯದಲ್ಲಿ 1.50 ಲಕ್ಷ ಅಸಂಘಟಿತ ಕಾರ್ಮೀಕರಿಗೆ ಸರ್ಕಾರ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿದೆ. ತರಬೇತಿ ಜೊತೆಗೆ ₹ 750 ಗೌರವಧನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಗುವುದು ಎಂದರು.
ಕಾರ್ಮಿಕ ಇಲಾಖೆ ಹಾಗೂ ಕಲ್ಯಾಣ ಮಂಡಳಿಯಲ್ಲಿ ಹಲವು ಕಾರ್ಮಿಕರು ಹೆಸರು ನೋಂದಣಿ ಮಾಡಿಸಿದ್ದು, ಪ್ರತಿವರ್ಷ ನವೀಕರಣ ಮಾಡಿಸಬೇಕು. ಆಕಸ್ಮಿಕವಾಗಿ ಕಾರ್ಮಿಕರು ಮರಣ ಹೊಂದಿದರೆ ₹ 5 ಲಕ್ಷ, ಅಪಘಾತದಲ್ಲಿ ಗಾಯಗೊಂಡರೆ ಚಿಕಿತ್ಸೆಗಾಗಿ ₹ 1 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಮಕ್ಕಳ ಶಿಕ್ಷಣ, ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ, ಗುಂಪುಗಳಿಗೆ ಸಾಲ ಸೌಲಭ್ಯ, ಮಕ್ಕಳ ಮದುವೆಗಳಿಗೆ ಸರ್ಕಾರ ನೆರವಿನ ಹಸ್ತ ನೀಡುತ್ತದೆ. ಈ ಎಲ್ಲಾ ಸೌಲಭ್ಯವನ್ನು ಸದ್ಬಳಕೆಗೆ ಮಾಡಿಕೊಳ್ಳಬೇಕು ಎಂದು ಕೋರಿದರು.
ತರಬೇತಿ ಕಾರ್ಯಾಗಾರದಲ್ಲಿ ಕಟ್ಟಡ ಹಾಗೂ ಇತರೆ ಕಾರ್ಮಿಕರು ಬಳಸುವ ಸಾಧನಗಳು ಹಾಗೂ ಬಳಕೆ ಬಗ್ಗೆ ಎಂಜಿನಿಯರ್ಗಳಾದ ರಾಜೇಶ್, ಪೀಟರ್, ಅರಸನ್, ವಾಸುದೇವ ಗುಣನ್ ಅರಿವು ಮೂಡಿಸಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಉಪಾಧ್ಯಕ್ಷ ಶಿವ, ಕಾರ್ಯದರ್ಶಿ ರಾಮಾಂಜಿ, ಸಹ ಕಾರ್ಯದರ್ಶಿ ಶೇಷಾರೆಡ್ಡಿ, ಖಜಾಂಚಿ ಮುಜುಬು, ಸದಸ್ಯರಾದ ನೂರುಲ್ಲಾ, ಮಂಜುನಾಥ, ಶ್ರೀನಿವಾಸ್, ಸರೋಣ್, ಅಮರನಾಥ್, ಮಂಜುನಾಥ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.