ಶಿಡ್ಲಘಟ್ಟ: ‘ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಭವನವನ್ನು ₹4 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ’ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
‘ಸುಸಜ್ಜಿತ, ಶಾಶ್ವತವಾದ ಹಾಗೂ ವೈಜ್ಞಾನಿಕವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಭವನ ನಿರ್ಮಿಸಿ, ಇಬ್ಬರ ಪುತ್ಥಳಿ ನಿರ್ಮಾಣ ಮಾಡಲಾಗುತ್ತದೆ. ಅವರ ಪುಸ್ತಕಗಳು ಸೇರಿದಂತೆ ಉತ್ತಮ ಗ್ರಂಥಾಲಯದ ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದ್ದಾರೆ.
‘ಬಿ.ಆರ್. ಅಂಬೇಡ್ಕರ್ ಅವರ ಹೆಸರಿನ ಭವನಕ್ಕಾಗಿ ನಗರದ ಹೃದಯ ಭಾಗದ ತೋಟಗಾರಿಕೆ ಇಲಾಖೆ ಉಳಿಸಿಕೊಂಡಿರುವ ಜಮೀನಿನಲ್ಲಿ ಸೂಕ್ತ ಜಾಗವನ್ನು ಗುರುತಿಸಿ ಕಟ್ಟಡ ನಿರ್ಮಿಸಲು ನೆರವಾಗಬೇಕು’ ಎಂದು ತಾಲ್ಲೂಕಿನ ದಲಿತ ಯುವ ಮುಖಂಡರು ಮುನಿಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಹೊಸಕೋಟೆಯ ಕನ್ನಮಂಗಲ ಗ್ರಾಮದ ಸಂಸದರ ತೋಟದ ಮನೆಯಲ್ಲಿ ಯುವಕರೊಂದಿಗೆ ಸಂಸದರು ಚರ್ಚಿಸಿ ಆಶ್ವಾಸನೆ ನೀಡಿದ್ದಾರೆ.
‘ನನಗೆ ಸುಳ್ಳು ಭರವಸೆ ನೀಡುವ ಅಭ್ಯಾಸವಿಲ್ಲ. ಮಾತಿಗಿಂತ ಕೆಲಸ ಮುಖ್ಯ. ಒಳ್ಳೆಯ ಕೆಲಸಕ್ಕೆ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ. ದಲಿತ ಸಂಘಟನೆಗಳು ತಮ್ಮ ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳು ಮರೆತು ಎಲ್ಲರೂ ಒಂದಾಗಿ ಕೆಲಸ ಮಾಡಿದಾಗ ಮಾತ್ರ ಶಕ್ತಿ ಹೆಚ್ಚಾಗುವುದರ ಜೊತೆಗೆ ಕೆಲಸವೂ ಪರಿಪೂರ್ಣವಾಗುತ್ತದೆ’ ಎಂದು ಮುನಿಸ್ವಾಮಿ ಹೇಳಿದರು.
‘ಸಮಾಜ ಕಲ್ಯಾಣ ಇಲಾಖೆಯಿಂದ ಹಾಗೂ ಕೇಂದ್ರದಿಂದ ಅನುದಾನ ಮಂಜೂರು ಮಾಡಿಸಲಾಗುತ್ತದೆ. ಇನ್ನು ಒಂದು ವಾರದೊಳಗೆ ಅಧಿಕಾರಿಗಳು ಮತ್ತು ತಾಲ್ಲೂಕಿನ ದಲಿತ ಸಂಘಟನೆಗಳ ಸಭೆ ಕರೆದು ನಗರದ ಹೃದಯ ಭಾಗದಲ್ಲೇ ಉಪಯುಕ್ತವಾದ ಸ್ಥಳ ಗುರ್ತಿಸುವ ಕೆಲಸ ಮಾಡಲಾಗುತ್ತದೆ’ ಎಂದರು.
‘ದಲಿತ ಸಂಘಟನೆಗಳು ಸತತವಾಗಿ 30 ವರ್ಷಗಳಿಂದ ಹೋರಾಟಗಳು ಮಾಡಿಕೊಂಡು ಬರುತ್ತಿವೆ. ತಾಲ್ಲೂಕಿಗೆ ಹಲವು ಗ್ರೇಡ್ -1 ಅಧಿಕಾರಿಗಳು ಬಂದು ಹೋಗುತ್ತಿದ್ದಾರೆ. ಯಾವೊಬ್ಬ ಅಧಿಕಾರಿಯೂ ಸಹಾ ಕಾಳಜಿ ವಹಸುತ್ತಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಭವನಕ್ಕಾಗಿ ₹1.5 ಕೋಟಿ ಅನುದಾನ ಮೀಸಲಿಟ್ಟಿದೆ. ಆದರೆ ಅಧಿಕಾರಿಗಳು ಅಂಬೇಡ್ಕರ್ ಭವನಕ್ಕಾಗಿ ಜಾಗ ಗುರ್ತಿಸುವಲ್ಲಿ ಹಾಗೂ ನಗರದಲ್ಲಿ ಭವನ ನಿರ್ಮಿಸಲು ಹಿಂದೇಟು ಹಾಕುತ್ತಿರುವುದು ಬೇಸರದ ಸಂಗತಿಯಾಗಿದೆ’ ಎಂದು ದಲಿತ ಮುಖಂಡರು ಬೇಸರ ವ್ಯಕ್ತಪಡಿಸಿದರು.
‘ಅಂಬೇಡ್ಕರ್ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಅವರನ್ನ ಜಾತಿಯ ದೃಷ್ಟಿಕೋನದಲ್ಲಿ ಯಾರೂ ನೋಡಬಾರದು. ರಂಗಮಂದಿರ ಇರದ ಶಿಡ್ಲಘಟ್ಟದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾದರೆ ನಗರದಲ್ಲಿ ಕಲೆ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು, ವಿವಿಧ ಜಯಂತಿಗಳನ್ನು ಆಚರಿಸಲು ಅನುಕೂಲವಾಗುತ್ತದೆ. ಕ್ಷೇತ್ರದ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಮನಸ್ಸು ಮಾಡಿ ಭವನ ನಿರ್ಮಿಸಬೇಕು’ ಎಂದು ದಲಿತ ಯುವ ಮುಖಂಡರು ಮನವಿಮಾಡಿದರು.
ಮಾಜಿ ಶಾಸಕ ಎಂ. ರಾಜಣ್ಣ, ದಲಿತ ಮುಖಂಡರಾದ ಬೈರಗಾನಹಳ್ಳಿ ಗೋವಿಂದ, ಈಧರೆ ಪ್ರಕಾಶ್, ವೆಂಕಟೇಶ್, ಮಳ್ಳೂರು ಅಶೋಕ, ವೇಣು, ಭಕ್ತರಹಳ್ಳಿ ಪ್ರತೀಶ್, ಆನಂದ್ ಕುಮಾರ್, ವಿಜಯ್ ಕುಮಾರ್, ದೊಣ್ಣಹಳ್ಳಿ ರಮೇಶ್, ವೇಣು, ಹರಿಪ್ರಸಾದ್, ಕಿರಣ್, ಮುನಿಆಂಜಿನಪ್ಪ, ಮುನಿಕೃಷ್ಣ, ದೇವರಮಳ್ಳೂರು ಕ್ರಿಷ್ಣಪ್ಪ, ಚಲವಾಧಿ ತ್ಯಾಗರಾಜು, ನಗರಸಭೆ ಸದಸ್ಯ ಕೃಷ್ಣಮೂರ್ತಿ, ಕೋಟಹಳ್ಳಿ ಅನಿಲ್ ಕುಮಾರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.