ಚಿಕ್ಕಬಳ್ಳಾಪುರ: ನಗರದ ಸ್ವಚ್ಛತೆ ವಿಚಾರದಲ್ಲಿ ನಾಗರಿಕರು ನಗರಸಭೆಯ ಜತೆಗೆ ಸಹಕರಿಸಬೇಕು ಎಂದು ನಗರಸಭೆ ಅಧ್ಯಕ್ಷ ಡಿ.ಎಸ್. ಆನಂದರೆಡ್ಡಿ ಬಾಬು ಹೇಳಿದರು.
ಇಲ್ಲಿನ ವಾಪಸಂದ್ರದಲ್ಲಿ ಹಸಿರು ಸ್ವಯಂಸೇವಾ ಸಂಸ್ಥೆ, ನಗರಸಭೆ ಸಿಬ್ಬಂದಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸ್ವಚ್ಛತೆಯ ಅರಿವು ಮತ್ತು ಪ್ಲಾಸ್ಟಿಕ್ ಕಸ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರದ ಸ್ವಚ್ಛತೆ ನಗರಸಭೆಯ ಜವಾಬ್ದಾರಿ. ಜತೆಗೆ ನಾಗರಿಕರೂ ಸಹ ನಗರದ ಸ್ವಚ್ಛತೆಯ ಬಗ್ಗೆ ಅರಿವನ್ನು ಬೆಳೆಸಿಕೊಳ್ಳಬೇಕು. ಇದು ನಮ್ಮ ನಗರ. ಈ ನಗರ ಆರೋಗ್ಯವಾಗಿದ್ದರೆ ನಾವೂ ಸಹ ಚೆನ್ನಾಗಿ ಇರುತ್ತೇವೆ ಎನ್ನುವ ತಿಳಿವಳಿಕೆ ಪಡೆಯಬೇಕು ಎಂದರು.
ಎಲ್ಲೆಂದರಲ್ಲಿ ಕಸವನ್ನು ಎಸೆಯಬಾರದು. ಈ ರೀತಿಯಲ್ಲಿ ಮಾಡಿದರೆ ನಮ್ಮ ಮನೆಯನ್ನು ನಾವೇ ಅನಾರೋಗ್ಯದ ತಾಣವನ್ನಾಗಿ ಮಾಡಿದಂತೆ. ಈ ಬಗ್ಗೆ ಎಚ್ಚರವಹಿಸಬೇಕು ಎಂದರು.
ವಾಪಸಂದ್ರದ ಮಯೂರ ಬೇಕರಿಯಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದವರೆಗೆ ಪ್ಲಾಸ್ಟಿಕ್ ಸಂಗ್ರಹಿಸಲಾಯಿತು.