ಗೌರಿಬಿದನೂರು: ನಗರದ ಎಂ.ಎಸ್.ಎಸ್. ಶಾಲೆಯ ಆವರಣದಲ್ಲಿ ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆ ಹಾಗೂ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಉಚಿತ ಬೃಹತ್ ನೇತ್ರ ಶಸ್ತ್ರಚಿಕಿತ್ಸಾ ಶಿಬಿರವನ್ನು ನಗರಸಭಾ ಸದಸ್ಯ ಕಲೀಂಉಲ್ಲಾ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕಣ್ಣುಗಳನ್ನು ದಾನ ಮಾಡುವ ಮೂಲಕ ಅಂಧರ ಬಾಳಿನಲ್ಲಿ ಬೆಳಕು ತುಂಬಬೇಕು. ಹಾಗೆಯೆ ಕಣ್ಣಿನ ಪೊರೆ, ಕಪ್ಪುಗುಡ್ಡೆಯಲ್ಲಿ ಬಿಳುಪು, ಮೆಲು ಗಣ್ಣು ಇತ್ಯಾದಿ ಸಮಸ್ಯೆಗಳು ಇದ್ದಲ್ಲಿ ಆರಂಭದಲ್ಲೆ ಅದಕ್ಕೆ ನೇತ್ರ ತಜ್ಞರ ಸಲಹೆ ಮತ್ತು ಶಸ್ತ್ರಚಿಕಿತ್ಸೆ ಮಾಡಿಸಬೇಕಾಗಿದೆ ಎಂದು ಹೇಳಿದರು.
ನಗರಸಭಾ ಸದಸ್ಯ ವಿ. ಅಮರ್ನಾಥ್ ಮಾತನಾಡಿ, ಕೊರೊನಾ ವಿರುದ್ಧ ಹೋರಾಡುತ್ತಿರುವ ಈ ಸನ್ನಿವೇಶದಲ್ಲಿ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸುವುದು ಕಷ್ಟಕರ. ಆದರೂ ಗ್ರಾಮೀಣ ಭಾಗದ ಬಡವರ ಹಿತದೃಷ್ಟಿಯಿಂದ ಇಂದಿನ ಶಿಬಿರವನ್ನು ಅಚ್ಚುಕಟ್ಟಾಗಿ ನಡೆಸಿ ಕೊಟ್ಟಿದ್ದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ದೃಷ್ಟಿ ದೋಷವುಳ್ಳ ಸಾರ್ವಜನಿಕರು ಬೆಳಿಗ್ಗಿನಿಂದಲೆ ಸರದಿ ಸಾಲಿನಲ್ಲಿ ಅಂತರ ಪಾಲಿಸಿ ಮಾಸ್ಕ್ ಧರಿಸಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ತಪಾಸಣೆಯಲ್ಲಿ ಪಾಲ್ಗೊಂಡವರಿಗೆ ಉಚಿತ ಕಣ್ಣಿನ ಔಷಧಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಶಿಬಿರದಲ್ಲಿ 96 ಮಂದಿಗೆ ಪರೀಕ್ಷೆ, 60 ಮಂದಿಗೆ ಕೋವಿಡ್ ಪರೀಕ್ಷೆ ನೆರವೇರಿಸಿ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಯಿತು.
ಶಿಬಿರದಲ್ಲಿ ನಗರಸಭೆ ಮಾಜಿ ಸದಸ್ಯರಾದ ಚಿದಾನಂದಗುಪ್ತ,ಎಂ.ಎಸ್.ಎಸ್. ಕಾನ್ವೆಂಟಿನ ಕಾರ್ಯದರ್ಶಿ ಪಠಾಣ್ ಸೈಫುಲ್ಲಾ, ರಾಜಾಹೊನ್ನಪ್ಪ, ಶಂಕರ್ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಡಾ.ಭಾವನಾ, ನರಸಿಂಹಮೂರ್ತಿ, ಶಿವಪ್ರಕಾಶ್ ಭಾಗವಹಿಸಿದ್ದರು.