ಚಿಕ್ಕಬಳ್ಳಾಪುರ: ಶ್ಯಾಮಪ್ರಸಾದ್ ಮುಖರ್ಜಿ ಅವರ ಜನ್ಮದಿನವಾದ ಜು.6ರವರೆಗೆ ಪಕ್ಷದ ಯುವಘಟಕದಿಂದ ಜಿಲ್ಲೆಯಾದ್ಯಂತ ಬೂತ್ ಮಟ್ಟದಲ್ಲಿ ಸಸಿ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದುಬಿಜೆಪಿ ಜಿಲ್ಲಾ ವಕ್ತಾರ ರಮೇಶ್ ಬಾಯಿರಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.23 ಜನ ಸಂಘದ ಮುಖಂಡರಾದ ಶ್ಯಾಮಪ್ರಸಾದ್ ಮುಖರ್ಜಿ ಅವರ ಪುಣ್ಯ ಸ್ಮರಣೆ. ಅಂದಿನಿಂದ ಅವರ ಜನ್ಮದಿನವಾದ ಜು.6ರವರೆಗೆ ಜಿಲ್ಲೆಯಾದ್ಯಂತ ಬೂತ್ ಮಟ್ಟದಲ್ಲಿ ಯುವ ಘಟಕದಿಂದ ಸಸಿ ನೆಡುವುದು, ರಕ್ತದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕೆರೆಗಳು, ಬಾವಿಗಳು, ಕಲ್ಯಾಣಿಗಳನ್ನು ಸ್ವಚ್ಛಗೊಳಿಸುವುದು, ಪ್ಲಾಸ್ಟಿಕ್ ತೆರವಿನ ಸ್ವಚ್ಛ ಭಾರತ, ಸ್ವಚ್ಛ ಆರೋಗ್ಯ ಅಭಿಯಾನ ಮತ್ತು ರಕ್ತದಾನ ಶಿಬಿರಗಳನ್ನು ನಡೆಸಲಾಗುವುದು ಎಂದರು.
ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋವಿಡ್ ಸಂಕಷ್ಟದಲ್ಲಿರುವವರಿಗೆ ಪರಿಹಾರ ಧನವನ್ನು ನೀಡಿದೆ. ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಉತ್ತಮವಾಗಿ ಕೋವಿಡ್ ನಿರ್ವಹಣೆಯಲ್ಲಿ ತೊಡಗಿದೆ. ಇದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದೆ ಎಂದು ಹೇಳಿದರು.
ಬಿಜೆಪಿ ಕೇವಲ ಅಧಿಕಾರ ನಡೆಸುವುದಕ್ಕೆ ಸೀಮಿತವಾಗಿಲ್ಲ. ಕೋವಿಡ್ ಸೇರಿದಂತೆ ತುರ್ತು ಸಮಯದಲ್ಲಿ ಸೇವಾ ಚಟುವಟಿಕೆಗಳನ್ನೂ ಮಾಡುತ್ತಿದೆ.
ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಲಕ್ಷ್ಮಿನಾರಾಯಣ ಗುಪ್ತ, ಮಾಧ್ಯಮ ಸಹ ಪ್ರಮುಖ್ ಮಂಜು ಕಿರಣ್ ಗೋಷ್ಠಿಯಲ್ಲಿ ಇದ್ದರು.