ಬೆಂಗಳೂರು: ನಾಡ ಪಿಸ್ತೂಲ್ ಮತ್ತು ಗುಂಡುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಕೇರಳ ಮಂಜೇಶ್ವರ ಮೂಲದ ಇಬ್ಬರನ್ನು ಕೇಂದ್ರ ಅಪರಾಧ ವಿಭಾಗದ( ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಉಸ್ಮಾನ್ ರಫೀಕ್ ಅಲಿಯಾಸ್ ತಲಕ್ಕಿ ರಫೀಕ್ (28) ಮತ್ತು ಅಹಮ್ಮದ್ ಕಬೀರ್ (26) ಬಂಧಿತರು. ಇಬ್ಬರೂ ಸದ್ಯ ಭೂಪಸಂದ್ರದ ಮಹಮ್ಮದ್ ಲೇಔಟ್ನಲ್ಲಿ ನೆಲೆಸಿದ್ದಾರೆ. ಬಂದೂಕು, ಮೂರು ಜೀವಂತ ಗುಂಡು ಮತ್ತು ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂಜಯ ನಗರದ ಭೂಪಸಂದ್ರ ರೈಲ್ವೆ ಗೇಟ್ ಬಳಿ ಪಿಸ್ತೂಲ್ ಮಾರಾಟಕ್ಕೆ ಆರೋಪಿಗಳು ಯತ್ನಿಸಿದ್ದರು. ಆರೋಪಿ ಉಸ್ಮಾನ್ ರಫೀಕ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾವ ಉದ್ದೇಶಕ್ಕೆ ಪಿಸ್ತೂಲ್ ಮಾರಾಟ ಮಾಡುತ್ತಿದ್ದರು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.