ಚಿಕ್ಕಬಳ್ಳಾಪುರ: ಚದಲಪುರ ಕ್ರಾಸ್ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಚತುರ್ಭುಜಾಕೃತಿ ಮೇಲ್ಸೇತುವೆ ಬದಲಿಗೆ ಸಿಮೆಂಟ್ ಕಂಬಗಳ ಮೇಲೆ ಮೇಲ್ಸೇತುವೆ ನಿರ್ಮಿಸಬೇಕು ಎಂದು ಸೋಮವಾರ ಕೃಷಿಕ ಸಮಾಜ, ರೈತ ಸಂಘ, ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಮುಖಂಡರು ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಚದಲಪುರ ನಾರಾಯಣಸ್ವಾಮಿ, ‘ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಚದುಲಪುರ ಕ್ರಾಸ್ನಲ್ಲಿ ಮೇಲ್ಸೇತುವೆ ನಿರ್ಮಿಸುವಂತೆ ಸುಮಾರು ಒಂಬತ್ತು ವರ್ಷಗಳಿಂದ ಒತ್ತಾಯಿಸುತ್ತ ಬರಲಾಗುತ್ತಿದೆ. ಇತ್ತೀಚೆಗೆ ಮೇಲ್ಸೇತುವೆ ಮಂಜೂರಾಗಿದ್ದು, ಚದುಲಪುರ ಕ್ರಾಸ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಚತುರ್ಭುಜಾಕೃತಿ ಮಾದರಿಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿದು ಬಂದಿದೆ’ ಎಂದು ಹೇಳಿದರು.
‘ಈ ಹಿಂದೆ ತಾಲ್ಲೂಕಿನ ನಂದಿಕ್ರಾಸ್ ಬಳಿ ಚತುರ್ಭುಜಾಕೃತಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಅದರಿಂದ ಎರಡೂ ಬದಿಗಳಿಂದ ಬಂದು ತಿರುವು ಪಡೆಯುವ ವಾಹನ ಚಾಲಕರು, ಸವಾರರಿಗೆ ಎದುರಿನಿಂದ ಬರುವ ವಾಹನಗಳು ಕಾಣದೆ ಅಪಘಾತಗಳು ಸಂಭವಿಸುತ್ತಿವೆ’ ಎಂದು ತಿಳಿಸಿದರು.
‘ಸಿಮೆಂಟ್ ಕಂಬಗಳ ಮೇಲೆ ಮೇಲ್ಸೇತುವೆ ನಿರ್ಮಿಸುವುದರಿಂದ ಪಾರದರ್ಶಕತೆ ಕಾರಣಕ್ಕೆ ಅಪಘಾತಗಳನ್ನು ತಪ್ಪಿಸಬಹುದು. ಆದ್ದರಿಂದ ನಗರದ ವಾಪಸಂದ್ರ ಮತ್ತು ಅಣಕನೂರು ಬಳಿಯ ಮೇಲ್ಸೇತುವೆಗಳ ಮಾದರಿಯಲ್ಲಿಯೇ ಚದುಲಪುರ ಕ್ರಾಸ್ನಲ್ಲಿ ಸೇತುವೆ ನಿರ್ಮಿಸಲು ಕ್ರಮಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ‘ಶೀಘ್ರದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಈ ಬಗ್ಗೆ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವೆ’ ಎಂದು ಭರವಸೆ ನೀಡಿದರು.
ಮುಖಂಡರಾದ ಅಜ್ಜವಾರ ಶ್ರೀನಿವಾಸ್, ಯಲುವಹಳ್ಳಿ ಸೊಣ್ಣೇಗೌಡ, ಭಕ್ತರಹಳ್ಳಿ ಭೈರೇಗೌಡ, ತಾದೂರು ಮಂಜುನಾಥ್, ಸತ್ಯನಾರಾಯಣ, ಮುನಿನಂಜಪ್ಪ, ಮರಳಕುಂಟೆ ರಾಮಾಂಜಿನಪ್ಪ, ಮೂರ್ತಿ ಈ ವೇಳೆ ಹಾಜರಿದ್ದರು.