ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಯಿಂದ ಮಳೆನೀರು ಸಂಗ್ರಹ ಪಾಠ

Last Updated 21 ಡಿಸೆಂಬರ್ 2020, 4:10 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಮೇಲೂರು ಗ್ರಾಮದ ಒಂದನೇ ವಿಭಾಗದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಎಂ.ಕೆ. ರವಿಪ್ರಸಾದ್ ಮತದಾರರಲ್ಲಿ ಮಳೆನೀರು ಸಂಗ್ರಹದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

‘ನಿಮ್ಮ ಮನೆ ಬಳಿ ಮೋರಿ ಸ್ವಚ್ಛವಾಗಿದೆಯಾ? ನಿಮ್ಮ ನಲ್ಲಿಯಲ್ಲಿ ನೀರು ಸಮರ್ಪಕವಾಗಿ ಬರುತ್ತಿದೆಯಾ? ಬೆಳಗಿನ ಜಾವ ನೀರು ಹಿಡಿಯುವುದು ತಪ್ಪಿದೆಯಾ? ಇಲ್ಲಾ ಎಂದಾದರೆ, ಅದನ್ನು ಸರಿಪಡಿಸುವುದು ಮುಖ್ಯವಲ್ಲವೇ’ ಎಂದು ಅವರು ಮತದಾರರನ್ನೇ ಪ್ರಶ್ನಿಸುತ್ತಿದ್ದಾರೆ.

‘ನೀರು ನಮ್ಮೆಲ್ಲರಿಗೂ ಅತೀ ಅವಶ್ಯ. ಅದರಲ್ಲೂ ದನ, ಕರು, ಕುರಿ ಸಾಕಿ ಜೀವಿಸುತ್ತಿರುವವರಿಗೆ ಅತೀ ಅವಶ್ಯ. ಇದಕ್ಕೆ ಅಹರ್ನಿಶಿ ದುಡಿಯುತ್ತಿರುವ ಮೇಲೂರಿನ ಶ್ರೀನಿವಾಸ್ ಮೂರ್ತಿ(ಪುಲಿ) ಹಾಗೂ ಸಿಬ್ಬಂದಿ ಹಗಲು ರಾತ್ರಿಯೆನ್ನದೆ ಬೋರ್‌ವೆಲ್‌ಗಳನ್ನು ಚಾಲೂ ಮಾಡಿ ಟ್ಯಾಂಕ್‌ಗಳಿಗೆ ತುಂಬಿ ಗ್ರಾಮಕ್ಕೆ ನೀರು ಹರಿಸುತ್ತಿರುವುದು ಕಷ್ಟಕರವಾದ ಕೆಲಸ. ಗ್ರಾಮದ ಕೊಳವೆಬಾವಿಗಳಲ್ಲಿ ನೀರಿಲ್ಲದೇ ಎಲ್ಲಾ ಜನರಿಗೆ ನೀರು ತಲುಪದೇ ಜನರ ಬೈಗುಳ ತಪ್ಪಿಲ್ಲ. ಇದಕ್ಕೆ ಇರುವುದೊಂದೇ ಪರಿಹಾರ, ಅದೇ ಮಳೆನೀರು ಸಂಗ್ರಹ’ ಎಂದು ಅರಿವು ಮೂಡಿಸುತ್ತಿದ್ದಾರೆ.

‘ನನ್ನ ಮನೆಗೆ ನಾನೇ ಅಳವಡಿಸಿ ಕೊಂಡಿರುವ ಮಳೆನೀರು ಸಂಗ್ರಹದಿಂದ ಐದರಿಂದ ಆರು ತಿಂಗಳು ನನಗೆ ಬೇರೆ ನೀರಿನ ಅವಶ್ಯಕತೆ ಇಲ್ಲ. ಈ ಪರ್ಯಾಯ ವ್ಯವಸ್ಥೆ ನಮಗೆ ಅತೀ ಜರೂರು ಬೇಕಿದೆ. ನಾನು ಈಗಾಗಲೇ 36ಕ್ಕೂ ಹೆಚ್ಚು ಕಡೆ ಈ ಮಳೆನೀರು ಸಂಗ್ರಹ ವ್ಯವಸ್ಥೆ ಅಳವಡಿಸಿ ಯಶಸ್ವಿಯಾಗಿರುವೆ’ ಎಂದು ಹೇಳುತ್ತಾರೆ.

ಇನ್ನು ಮನೆಗಳಿಗೆ ಮಳೆನೀರು ಸಂಗ್ರಹ ವ್ಯವಸ್ಥೆ ಮಾಡಿಸಿ ಕೊಂಡಿರುವವರ ಖುಷಿಯಂತೂ ಹೇಳತೀರದು. ಇದಕ್ಕೆ ಪರಿಕರಗಳನ್ನು ಮನೆಯ ಮಾಲೀಕರೇ ತಂದು ಕೊಡುತ್ತಾರೆ. ಅದರ ಅಂದಾಜು ವೆಚ್ಪ ಸುಮಾರು ₹ 6 ರಿಂದ ₹ 8 ಸಾವಿರ(ಇದಕ್ಕೂ ಪಂಚಾಯತಿಯಿಂದ ಸಹಾಯಧನ ಪಡೆಯಬಹುದು). ಇನ್ನು ಅಳವಡಿಕೆಗೆ ನಾನು ಪಡೆದ ಹಣವು ಮಾತ್ರ ಆ ಕೆಲಸದ ಸಮಯದಲ್ಲಿ ಅವರು ನೀಡುವ ತಿಂಡಿ, ಕಾಫಿ ಅಷ್ಟೇ. ಈ ಕಾರ್ಯ ನಮ್ಮ ಊರಿನಲ್ಲೂ ನಡೆದು ನಿಮ್ಮಗಳ ಮನೆ ಬಾಗಿಲಿಗೆ ತಾಯಿ ಗಂಗಮ್ಮನ ಹರಿಸುವುದೇ ನನ್ನ ಮೊದಲ ಗುರಿ’ ಎನ್ನುತ್ತಾರೆ.

‘ನೀವು ನೀರಿಗಾಗಿ ಸರದಿ ನಿಲ್ಲದೇ ರಾತ್ರಿ– ಹಗಲು ಕಾಯದೇ, ನೀರನ್ನು ಸಂಗ್ರಹಿಸುವುದೇ ಒಂದು ಕೆಲಸವೆನ್ನದೇ, ನಿಮ್ಮ ಅಮೂಲ್ಯ ಸಮಯವನ್ನು ಉಳಿಸುವುದೇ ನನ್ನ ಗುರಿ. ಇದು ಸಾಧ್ಯವಾಗದ ಕೆಲಸ ಸುಮ್ಮನೆ ಹೇಳುತ್ತಾನೆ ಎಂದಾದರೆ ನನ್ನ ದೂರವಾಣಿಗೆ ಕರೆ ಮಾಡಿ ಎಲ್ಲಾ ಮಳೆನೀರು ಸಂಗ್ರಹ ಗ್ರಾಹಕರ ದೂರವಾಣಿ ಸಂಖ್ಯೆ ನೀಡುತ್ತೇನೆ. ನೀವೇ ಕರೆ ಮಾಡಿ ತಿಳಿದುಕೊಳ್ಳಿ’ ಎಂದು ತಿಳಿಹೇಳುತ್ತಿದ್ದಾರೆ ರವಿಪ್ರಸಾದ್.

ನಿಮಗೇ ಯಾಕೆ ಮತ ನೀಡಬೇಕು. ನಿಮ್ಮ ಅಭಿವೃದ್ಧಿಯ ರೂಪರೇಷೆಗಳೇನು ಎಂದು ಪ್ರತಿಯೊಬ್ಬ ಮತದಾರರೂ ಕೇಳಬೇಕು. ನನ್ನ ಮೊದಲ ಆದ್ಯತೆ ನೀರು. ಅದನ್ನು ನಾನು ಕಾರ್ಯ ರೂಪಕ್ಕೆ ತರಲು ನಮಗೆ ಒಂದು ‌ಅವಕಾಶ ನೀಡಿ ಎಂದು ಮತದಾರರನ್ನು ಕೇಳುತ್ತಿದ್ದೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT