ಚಿಕ್ಕಬಳ್ಳಾಪುರ: ತಾಲ್ಲೂಕಿನ ಮರಳುಕುಂಟೆಯ ರೈತ ನಾರಾಯಣಸ್ವಾಮಿ ಅವರ ತೋಟಕ್ಕೆಕೇಂದ್ರ ಕೃಷಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅಭಿಲಕ್ಷ ಲಿಖಿ ನೇತೃತ್ವದ ಅಧಿಕಾರಿಗಳ ತಂಡ ಬುಧವಾರ ಭೇಟಿ ನೀಡಿತ್ತು. ಸುತ್ತಮುತ್ತಲಿನ ರೈತರ ಜತೆ ಸಂವಾದ ನಡೆಸಿದರು. ಸಮಸ್ಯೆಗಳ ಕುರಿತು ರೈತರಿಂದ ಮಾಹಿತಿ ಪಡೆದರು.
ನಾರಾಯಣಸ್ವಾಮಿ ತಮ್ಮ ತೋಟದಲ್ಲಿಡ್ರ್ಯಾಗನ್ ಪ್ರೂಟ್, ಸೇಬು, ಲಾಂಗಾವ್, ದಾಳಿಂಬೆ ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ತಜ್ಞರ ಮಾರ್ಗದರ್ಶನ ಹಾಗೂ ಆಧುನಿಕ ತಂತ್ರಜ್ಞಾನ ಬಳಸಿ ಡ್ರ್ಯಾಗನ್ ಪ್ರೂಟ್ ಬೆಳೆಯಲಾಗುತ್ತಿದೆ. ಉತ್ತಮ ಇಳುವರಿಯಿಂದ ಒಳ್ಳೆಯ ಆದಾಯ ದೊರೆಯುತ್ತಿದೆ ಎಂದು ಡ್ರ್ಯಾಗನ್ ಪ್ರೂಟ್ ಬೆಳೆಯುವ ವಿಧಾನ, ಸಮಸ್ಯೆಗಳು, ಮಾರುಕಟ್ಟೆ ಕುರಿತು ನಾರಾಯಣಸ್ವಾಮಿ ಅನುಭವ ಹಂಚಿಕೊಂಡರು.
ಕೇಂದ್ರ ಸರ್ಕಾರವು ರೈತರ ಅನುಕೂಲಕ್ಕಾಗಿ ಹಲವು ಯೋಜನೆ ಗಳನ್ನು ಅನುಷ್ಠಾನಗೊಳಿಸಿದೆ. ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದರು.
ಸಸ್ಯಗಳ ಪಾಲನೆ ಹಾಗೂ ಪೋಷಣೆಯನ್ನು ಯಾವ ರೀತಿ ಮಾಡಬೇಕು ಎನ್ನುವ ಕುರಿತು ರೈತರಿಗೆ ತಿಳಿಸಿದರು.
ಈ ವೇಳೆ ರೈತರು, ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆಗೆ ಹೆಸರಾಗಿರುವ ಜಿಲ್ಲೆಯಲ್ಲಿ ಇತ್ತೀಚೆಗೆ ಡ್ರ್ಯಾಗನ್ ಪ್ರೂಟ್ ಬೆಳೆಯಲು ರೈತರು ಒಲವು ತೋರುತ್ತಿದ್ದಾರೆ. ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು ಡ್ರ್ಯಾಗನ್ ಪ್ರೂಟ್ ಹಾಗೂ ಇತರೆ ಹಣ್ಣುಗಳನ್ನುಸಹಾಯಧನ ಯೋಜನೆಗೆ ಪರಿಗಣಿಸಬೇಕು ಎಂದು ಕೋರಿದರು.
ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ಪರಶಿವಮೂರ್ತಿ, ಜಂಟಿ ನಿರ್ದೇಶಕ ಎನ್. ಪ್ರಸಾದ್, ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕಿ ಎಂ. ಗಾಯತ್ರಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.