ಜಿಲ್ಲಾ ಪಂಚಾಯಿತಿಯಲ್ಲಿ 2016ರಲ್ಲಿ ಅಧ್ಯಕ್ಷರಾದ ಪಿ.ಎನ್. ಕೇಶವರೆಡ್ಡಿ ವಿರುದ್ಧ ಆರು ತಿಂಗಳಲ್ಲಿಯೇ ಕಾಂಗ್ರೆಸ್ ಸದಸ್ಯರು ತಿರುಗಿಬಿದ್ದರು. 2017ರಲ್ಲಿ ಆರಂಭವಾದ ಅಂತಃಕಲಹ 2018ರ ಆರಂಭದಲ್ಲಿ ಹೆಚ್ಚಿತು. ಒತ್ತಡಕ್ಕೆ ಮಣಿದು ಕೇಶವರೆಡ್ಡಿ ರಾಜೀನಾಮೆ ನೀಡಿದರು. 2018ರ ಮಾರ್ಚ್ 7ರಂದು ಹೊಸೂರು ಕ್ಷೇತ್ರದ ಸದಸ್ಯ ಎಚ್.ವಿ. ಮಂಜುನಾಥ್ ಅಧ್ಯಕ್ಷರಾಗಿ ಆಯ್ಕೆಯಾದರು. ಸುಧಾಕರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಜಿಲ್ಲಾ ಪಂಚಾಯಿತಿ ರಾಜಕೀಯ ಆಟಗಳು ಮತ್ತೊಂದು ಮಗ್ಗುಲಿಗೆ ಹೊರಳಿತು. 2019ರ ಸೆಪ್ಟೆಂಬರ್ 23ರಂದು ಮಂಜುನಾಥ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸುಧಾಕರ್ ತಂತ್ರಗಾರಿಕೆಯ ಫಲವಾಗಿ ಸ್ವಪಕ್ಷೀಯರಲ್ಲೇ ಬಂಡಾಯ ಎದ್ದ ಬಾಗೇಪಲ್ಲಿ ಕಸಬಾ ಕ್ಷೇತ್ರದ ಸದಸ್ಯ ಎಂ.ಬಿ. ಚಿಕ್ಕನರಸಿಂಹಯ್ಯ ಅಧ್ಯಕ್ಷರಾದರು.