ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ದೇಶದ 75ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ ಶುಕ್ರವಾರ (ಮಾ.12) ‘ಅಮೃತ ಮಹೋತ್ಸವ’ ಕಾರ್ಯಕ್ರಮ ನಡೆಯಲಿದೆ.
‘ಕರ್ನಾಟಕದ ಜಲಿಯನ್ ವಾಲಾಬಾಗ್’ ಎಂದೇ ಹೆಸರಾಗಿರುವ ವಿದುರಾಶ್ವತ್ಥ ಸೇರಿದಂತೆ ದೇಶದ ಆಯ್ದ 75 ಸ್ವಾತಂತ್ರ್ಯ ಹೋರಾಟದ ಸ್ಥಳಗಳಲ್ಲಿ ಈ ಕಾರ್ಯಕ್ರಮ ಸಂಘಟಿಸಲಾಗಿದೆ.
ಮಧ್ಯಾಹ್ನ 12ರಿಂದ 12.30ರ ನಡುವೆ ಗುಜರಾತ್ನ ಸಬರಮತಿ ಆಶ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಅಮೃತ ಮಹೋತ್ಸವ’ಕ್ಕೆ ಚಾಲನೆ ನೀಡುವರು. ವಿದುರಾಶ್ವತ್ಥದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ವರ್ಚುವಲ್ ಕಾರ್ಯಕ್ರಮ ವೀಕ್ಷಿಸುವರು.
‘ಅಮೃತ ಮಹೋತ್ಸವ’ದ ಅಂಗವಾಗಿ ವಿದುರಾಶ್ವತ್ಥದಲ್ಲಿ ಬೆಳಿಗ್ಗೆ ಯೋಗಾಸನ, ಸೈಕಲ್ ರ್ಯಾಲಿ, ನಾಟಕ ಪ್ರದರ್ಶನ ನಡೆಯಲಿದೆ. 11ಕ್ಕೆ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಸ್ವಾತಂತ್ರ್ಯ ಸ್ಮಾರಕಕ್ಕೆ ಗೌರವ ಸಮರ್ಪಿಸುವರು. ನಂತರ ಕರ್ನಾಟಕ ಜಲಿಯನ್ ವಾಲಾಬಾಗ್ ಸ್ವಾತಂತ್ರ್ಯ ಸಂಗ್ರಾಮದ ಕಿರುಚಿತ್ರ ವೀಕ್ಷಿಸುವರು.
ಆಯ್ದ 220 ಮಂದಿಗೆ ಮಾತ್ರ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.