ಚಿಕ್ಕಬಳ್ಳಾಪುರ: ‘ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಭವ್ಯ ಇತಿಹಾಸವಿದ್ದು, ಹಲ್ಮಿಡಿ ಶಾಸನ ಸೇರಿದಂತೆ ಹಲವು ದಾಖಲೆಗಳು ಕನ್ನಡ ಸಾಹಿತ್ಯದ ಅದ್ಭುತ ಇತಿಹಾಸಕ್ಕೆ ಹಿಡಿದ ಕನ್ನಡಿಯಾಗಿವೆ’ ಎಂದು ಉಪನ್ಯಾಸಕ ನಾಗೇಂದ್ರ ಸಿಂಹ ತಿಳಿಸಿದರು.
ನಗರದ ಪ್ರಶಾಂತ ನಗರ ನಿವಾಸಿ, ಪೊಲಿಸ್ ಕಾನ್ಸ್ಟೆಬಲ್ ಅಶ್ವಥ್ ರಾಜು ಅವರ ನಿವಾಸದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ವತಿಯಿಂದ ಆಯೋಜಿಸಿದ್ದ ‘ಮನೆಯಂಗಳದಲ್ಲಿ ನುಡಿ-ಸಿರಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಭಾಷೆ, ನೆಲ, ಜಲ ಮತ್ತು ಗಡಿಯ ರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆ. ಆದರೆ, ರಾಜ್ಯದಲ್ಲಿ ಇತ್ತೀಚೆಗೆ ಐಟಿ, ಬಿಟಿ ಸಂಸ್ಕೃತಿ ಹೆಚ್ಚಳದಿಂದ ಎಲ್ಲಾ ರಾಜ್ಯದ ಜನರು ನಮ್ಮ ರಾಜ್ಯದಲ್ಲಿ ನೆಲೆಯೂರಿರುವುದು ದುರಂತ. ಹೊರಗಿನವರ ಹಾವಳಿಯಿಂದ ನಮ್ಮ ಕನ್ನಡ ಮಾತೃಭಾಷೆಗೆ ದಕ್ಕೆಯಾಗುತ್ತಿದೆ ಇದು ಶೋಚನೀಯ’ ಎಂದು ಹೇಳಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಂ.ಭಾಷಾ, ನಗರ ಘಟಕದ ಅಧ್ಯಕ್ಷ ಚಂದ್ರಶೇಖರ್, ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್, ಕೋಶಾಧ್ಯಕ್ಷ ಬಾಬಾಜಾನ್, ಪದಾಧಿಕಾರಿಗಳಾದ ನಾಯ್ಡು, ಚರಣ್, ಗಂಗಾಧರ ಮೂರ್ತಿ, ವೆಂಕಟೇಶ್, ಸರಸ್ವತಿ, ವೆಂಕಟೇಶ್ ಹಾಜರಿದ್ದರು.