ಬೆಂಗಳೂರು: ಅಕ್ರಮವಾಗಿ ವಾಹನ ಚಾಲನಾ ತರಬೇತಿ ಶಾಲೆ ನಡೆಸುತ್ತಿದ್ದ ಅಮೃತಹಳ್ಳಿಯ ‘ಮೊಬೈಲ್ ಝೋನ್’ ಹಾಗೂ ‘ರಾಥೋಡ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್’ ಮೇಲೆ ಬುಧವಾರ ದಾಳಿ ನಡೆಸಿದ ಸಾರಿಗೆ ಅಧಿಕಾರಿಗಳು, ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಾರ್ವಜನಿಕರೊಬ್ಬರು ನೀಡಿದ್ದ ಮಾಹಿತಿ ಆಧರಿಸಿ ಯಲಹಂಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ಎಸ್. ಪ್ರಕಾಶ್ ನೇತೃತ್ವದ ತಂಡ ಈ ದಾಳಿ ಮಾಡಿತು. ಸ್ಥಳೀಯ ನಿವಾಸಿ ಹೇಮಂತ್ ಹಾಗೂ ಆತನ ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಅಮೃತಹಳ್ಳಿ ಠಾಣೆಯ ಪೊಲೀಸರು ತಿಳಿಸಿದರು.
ಆರ್ಟಿಒ ಪ್ರಕಾಶ್, ‘ವಾಹನಗಳ ಚಾಲನಾ ತರಬೇತಿ ಶಾಲೆ ನಡೆಸಲು ಕೇಂದ್ರ ಮೋಟಾರು ವಾಹನಗಳ ಕಾಯ್ದೆ ಅಡಿ ಪರವಾನಗಿ ಪಡೆಯುವುದು ಕಡ್ಡಾಯ. ಜತೆಗೆ, ಇಲಾಖೆ ನಿಗದಿಪಡಿಸಿದ ಶುಲ್ಕವನ್ನಷ್ಟೇ ಪಡೆಯಬೇಕು. ಆದರೆ, ಈ ಎರಡು ಸಂಸ್ಥೆಗಳ ಮಾಲೀಕರು ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದರು’ ಎಂದರು.
‘ಪರವಾನಗಿ ಇರುವುದಾಗಿಯೇ ಸಾರ್ವಜನಿಕರನ್ನು ನಂಬಿಸಿ ವಂಚಿಸಿದ್ದಾರೆ. ಅವರ ಕೃತ್ಯದ ಬಗ್ಗೆ ಜನರಿಂದಲೂ ಹೇಳಿಕೆ ಪಡೆದುಕೊಂಡಿದ್ದೇವೆ. ಇದುವರೆಗೂ ಎಷ್ಟು ಜನರಿಗೆ ಚಾಲನಾ ಪರವಾನಗಿ ಮಾಡಿಸಿ ಕೊಟ್ಟಿದ್ದಾರೆ ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ. ದಾಳಿ ವೇಳೆ ಎರಡೂ ಅಂಗಡಿಗಳಲ್ಲಿ ಅರ್ಜಿ ನಮೂನೆಗಳು ಪತ್ತೆಯಾಗಿವೆ’ ಎಂದು ಅವರು ತಿಳಿಸಿದರು.