ಗೌರಿಬಿದನೂರು: ‘ಅಧಿಕಾರ ಮತ್ತು ಹಣದಿಂದ ಮಾತ್ರ ಜನರ ವಿಶ್ವಾಸ ಗಳಿಸಲು ಸಾಧ್ಯವಿಲ್ಲ. ಅವರ ಸಂಕಷ್ಟಗಳಿಗೆ ಆಸರೆಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಅವರಲ್ಲಿ ದೃಢ ನಂಬಿಕೆ ಉಳಿಸಿಕೊಂಡು ಪ್ರೀತಿ ಪಾತ್ರರಾಗಲು ಸಾಧ್ಯ’ ಎಂದು ಕೆ.ಎಚ್.ಪಿ ಫೌಂಡೇಷನ್ ಅಧ್ಯಕ್ಷ ಕೆ.ಎಚ್. ಪುಟ್ಟಸ್ವಾಮಿಗೌಡ ತಿಳಿಸಿದರು.
ತಾಲ್ಲೂಕಿನ ಚಿಕ್ಕಕುರುಗೋಡು ಗ್ರಾಮದಲ್ಲಿ ಗ್ರಾ.ಪಂ. ಚುನಾವಣೆಯ ಪೂರ್ವಭಾವಿ ಸಭೆ ಹಾಗೂ ಮಹಿಳೆಯರಿಗೆ ಸೀರೆ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ಥಳೀಯ ಮಟ್ಟದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಅವರ ನೋವು, ನಲಿವುಗಳಿಗೆ ಆಸರೆಯಾದರೆ ಮಾತ್ರ ಅವರ ವಿಶ್ವಾಸ ಮತ್ತು ನಂಬಿಕೆ ಪಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಫೌಂಡೇಷನ್ ವತಿಯಿಂದ ಕಳೆದ ಒಂದು ವರ್ಷದಿಂದಲೂ ಇಡೀ ತಾಲ್ಲೂಕಿನಲ್ಲಿ ಸಂಚರಿಸಿ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಭಾಗಿಯಾಗಿ ಕೈಲಾದಷ್ಟು ಮಟ್ಟಿಗೆ ಜನರ ಸೇವೆ ಮಾಡಲು ಮುಂದಾಗಿದ್ದೇವೆ ಎಂದರು.
ಮುಖಂಡ ಜಿ.ಕೆ. ಸತೀಶ್ ಮಾತನಾಡಿ, ‘ಪುಟ್ಟಸ್ವಾಮಿಗೌಡರು ಸದಾ ಬಡವರ, ರೈತರ ಹಾಗೂ ಕಾರ್ಮಿಕ ವರ್ಗದವರ ಹಿತ ಕಾಪಾಡಲು ಬದ್ಧರಾಗಿದ್ದಾರೆ. ಅವರ ಸೇವಾ ಮನೋಭಾವದಿಂದ ನಿಮ್ಮೆಲ್ಲರ ಹಿತವನ್ನು ಬಯಸಿ ಸಾಕಷ್ಟು ಸಮಾಜಮುಖಿ ಕಾರ್ಯಗಳಿಗೆ ಮುಂದಾಗಿದ್ದಾರೆ. ಈ ಬಾರಿಯ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಜನರೊಂದಿಗೆ ಚರ್ಚಿಸಿ ಬಣದ ವತಿಯಿಂದ ಪ್ರಾಮಾಣಿಕ ಮತ್ತು ದಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗ್ರಾ.ಪಂ. ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಪಡೆಯುವ ವಿಶ್ವಾಸ ನಮ್ಮಲ್ಲಿದೆ’ ಎಂದು ತಿಳಿಸಿದರು.