ಚೇಳೂರು: ಕೊರೊನಾ ತಡೆಗೆ ಪೌಷ್ಟಿಕ ಆಹಾರ ಸೇವನೆ ಅಗತ್ಯ ಎಂದು ಗುಬ್ಬಿ ಎಸಿಡಿಪಿಒ ಹೊನ್ನಪ್ಪ ತಿಳಿಸಿದರು.
ಹೋಬಳಿಯ ಬಿದರೆ ಗ್ರಾಮದ ಅಂಗನವಾಡಿಯಲ್ಲಿ ನಡೆದ ಪೋಷಣ್ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ಪೌಷ್ಟಿಕ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆ ಮೂಲಕ ಆರೋಗ್ಯ ಸುಧಾರಿಸಬಹುದು ಎಂದು ತಿಳಿಸಿದರು.
ಮಕ್ಕಳು ಹಾಗೂ ಇಳಿ ವಯಸ್ಸಿನವರು ಹೆಚ್ಚು ಪೌಷ್ಟಿಕ ಆಹಾರ ಸೇವಿಸಬೇಕು. ಗ್ರಾಮೀಣ ಭಾಗದಲ್ಲಿ ಸಿಗುವಂಥ ಸೊಪ್ಪು, ತರಕಾರಿ ಸೇವನೆ ಮಾಡಬೇಕು. ಗರ್ಭಿಣಿ ಮತ್ತು ಬಾಣಂತಿಯರು ಒಳ್ಳೆಯ ಆಹಾರ ಸೇವಿಸಬೇಕು ಎಂದು ತಿಳಿಸಿದರು.
ಬಿದರೆ ವೃತ್ತದ ಅಂಗನವಾಡಿ ಮೇಲ್ವಿಚಾರಕಿ ಶಿವಮ್ಮ ಮಾತನಾಡಿ, ಅಂಗನವಾಡಿ ಕೇಂದ್ರದ ಮೂಲಕ ಅಪೌಷ್ಟಿಕ ಮಕ್ಕಳ ಗುರುತಿಸುವಿಕೆ ಹಾಗೂ ಕೈ ತೋಟ ನಿರ್ಮಿಸಲಾಗುತ್ತಿದೆ. ಎಲ್ಲರಿಗೂ ಆರೋಗ್ಯ ನೀಡುವ ಕಾರ್ಯಕ್ರಮವನ್ನು ಈ ತಿಂಗಳು ಪೋಷಣ್ ಅಭಿಯಾನ ಮೂಲಕ ಮಾಡಲಾಗುತ್ತಿದೆ ಎಂದರು.
ಮಾತೃ ವಂದನಾ ಯೋಜನೆ ಜಿಲ್ಲಾ ಮೇಲ್ವಿಚಾರಕ ರಂಗರಾಜು, ಬಿದರೆ ವೃತ್ತದ ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.