ಶಿಡ್ಲಘಟ್ಟ: ‘ಕೊರೊನಾ ದೊಡ್ಡ ರೋಗವಲ್ಲ. ಅದಕ್ಕೆ ಹೆದರುವ ಅಗತ್ಯ ಇಲ್ಲ. ನೆಗಡಿ, ಕೆಮ್ಮು, ಜ್ವರದಂತೆ ಬಂದು ಹೋಗುವ ಸಾಮಾನ್ಯ ವೈರಲ್ ಫೀವರ್. ಪೌಷ್ಠಿಕ ಆಹಾರ ಸೇವಿಸಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು, ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿದ್ದರೆ ಸಾಕು’ ಎನ್ನುತ್ತಾರೆ ಕೋವಿಡ್ನಿಂದ ಗುಣಮುಖರಾಗಿರುವ ತಾಲ್ಲೂಕಿನ ಮೇಲೂರಿನ ಎಲ್.ಜಮುನಾ ಧರ್ಮೇಂದ್ರ.
ಕೊರೊನಾ ದೃಢವಾದ ನಂತರ ಕೋವಿಡ್ ಕೇರ್ ಸೆಂಟರ್ನಲ್ಲಿ ಎಂಟು ದಿನ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಜಮುನಾ ಅವರು ಜೊತೆಜೊತೆಗೆ ಕೋವಿಡ್ ಕುರಿತ ಭಯದಿಂದಲೂ ಹೊರಬಂದಿದ್ದಾರೆ.
‘ಕೋವಿಡ್ನ ಯಾವ ಲಕ್ಷಣಗಳೂ ಇರಲಿಲ್ಲ. ಮನೆಯ ಮುಂದೆ ತರಕಾರಿ ಮಾರುವವರ ಮಗುವನ್ನು ಎತ್ತಿ ಆಡಿಸುತ್ತಿದ್ದೆ. ಆ ಮಗುವಿಗೆ ಸೋಂಕು ದೃಡಪಟ್ಟ ನಂತರ ನಾನೇ ಸ್ವಯಂಪ್ರೇರಿತವಾಗಿ ತೆರಳಿ ಪರೀಕ್ಷೆ ಮಾಡಿಸಿಕೊಂಡಿದ್ದೆ. ಸೋಂಕು ದೃಢವಾದಾಗ ತುಂಬಾ ಭಯಗೊಂಡಿದ್ದೆ. ನನ್ನ ಗಂಡ ಧರ್ಮೇಂದ್ರ ಅವರು ನನ್ನಲ್ಲಿ ಧೈರ್ಯ ತುಂಬಿದರು’ ಎಂದು ಜಮುನಾ ಸ್ಮರಿಸಿಕೊಂಡರು.
ಮನೆಯಿಂದ ಕೋವಿಡ್ ಆರೈಕೆ ಕೇಂದ್ರಕ್ಕೆ ತೆರಳುವಾಗ ತುಂಬಾ ಬೇಸರವಾಗಿತ್ತು. ಅಕ್ಕ ಪಕ್ಕದವರು ಏನೆಂದುಕೊಳ್ಳುತ್ತಾರೊ, ಮಾತನಾಡುತ್ತಾರೊ ಇಲ್ಲವೊ ಎಂದು ಅನಿಸಿತ್ತು. ಆರೈಕೆ ಕೇಂದ್ರದಲ್ಲಿದ್ದಾಗ ಕುಟುಂಬದವರು ಕೆರೆ ಮಾಡಿ ಧೈರ್ಯ ತುಂಬುತ್ತಿದ್ದರು. ಎರಡು ದಿನದಲ್ಲೇ ಇದು ತೀರಾ ಸಾಮಾನ್ಯ ಕಾಯಿಲೆ ಎನ್ನುವುದು ನನ್ನ ಅರಿವಿಗೆ ಬಂತು ಎಂದರು.
ಕೋವಿಡ್ ಸೆಂಟರ್ನಲ್ಲಿ ಎಲ್ಲರೂ ಪರಸ್ಪರ ಕಷ್ಟ, ಸುಖ ಮಾತನಾಡಿಕೊಂಡು ಆರಾಮವಾಗಿದ್ದೆವು. ನಮಗೆ ಚಿಕಿತ್ಸೆ ನೀಡಿದ ಡಾ.ರಮೇಶ್ ನಮ್ಮನ್ನು ಕುಟುಂಬ ಸದಸ್ಯರಂತೆ ನೋಡಿಕೊಂಡರು. ಸಕಾರಾತ್ಮಕ ಭಾವ ತುಂಬಿದರು. ಕೇಂದ್ರದಲ್ಲಿನ ಆರೈಕೆ, ಪೌಷ್ಠಕ ಆಹಾರದಿಂದಾಗಿ ಶೀಘ್ರ ಗುಣವಾದೆ ಎನ್ನುತ್ತಾರೆ ಅವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.