ಚಿಕ್ಕಬಳ್ಳಾಪುರ: ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹಾಗೂ ಸಿಪಿಎಂ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ (73) ಶುಕ್ರವಾರ ನಿಧನರಾದರು. ಅವರು ಅವಿವಾಹಿತರಾಗಿದ್ದರು. ಚಿಂತಾಮಣಿ ತಾಲ್ಲೂಕಿನ ಬೈರೇಬಂಡ ಗ್ರಾಮದ ಶ್ರೀರಾಮರೆಡ್ಡಿ, ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ರಾಜಕೀಯ ನೆಲೆ ಕಂಡುಕೊಂಡಿದ್ದರು.
1999 ಮತ್ತು 2004ರಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಆಯ್ಕೆ ಆಗಿದ್ದರು. ರಾಜ್ಯ ಸಿಪಿಎಂ ಕಾರ್ಯದರ್ಶಿಯೂ ಆಗಿ ಶ್ರೀರಾಮರೆಡ್ಡಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ರೈತ ಮತ್ತು ಕಾರ್ಮಿಕ ಹೋರಾಟಗಳನ್ನು ಕಟ್ಟುವಲ್ಲಿ ಮಂಚೂಣಿಯಲ್ಲಿ ಇದ್ದರು.
ಕಳೆದ ವರ್ಷದ ಮೇನಲ್ಲಿ ಕೋವಿಡ್ ತಗುಲಿದ್ದು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಇತ್ತೀಚೆಗೆ ಎರಡು ಮೊಣಕಾಲುಗಳಿಗೆ ಶಸ್ತ್ರಚಿಕಿತ್ಸೆ ನಡೆದಿತ್ತು.