ಚಿಕ್ಕಬಳ್ಳಾಪುರ: ನಗರದಲ್ಲಿ ನಡೆದ ವೆಂಕಟಲಕ್ಷ್ಮಮ್ಮ ಎಂಬುವವರ ಸರಗಳ್ಳತನಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ನೆಲಮಂಗಲದ ಇಮ್ರಾನ್ ಪಾಷಾ, ಸಿಕಂದರ್, ಬೆಂಗಳೂರಿನ ಗೌರಿಪಾಳ್ಯದ ಶಬರೀಶ್ ಬಂಧಿತರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ಕಾಡಿಗಾನಹಳ್ಳಿಯ ವೆಂಕಟಲಕ್ಷ್ಮಮ್ಮ, ಚಿಕ್ಕಬಳ್ಳಾಪುರದ ಎಇಒ ರಸ್ತೆಯಲ್ಲಿರುವ ತಮ್ಮ ಸಂಬಂಧಿ ಶ್ರೀನಿವಾಸ್ ಅವರ ಅಂಗಡಿಯ ಮುಂದೆ ಕುಳಿತ್ತಿದ್ದರು. ಈ ವೇಳೆ ಪಲ್ಸರ್ನಲ್ಲಿ ಬಂದ ದುಷ್ಕರ್ಮಿಗಳು ಅವರ 40 ಗ್ರಾಂ ಚಿನ್ನದ ಸರವನ್ನು ಕಳ್ಳತನ ಮಾಡಿದ್ದರು. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು.
ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಮತ್ತು ಬೆಂಗಳೂರಿನ ಶಂಕರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಹಲವು ಕಳ್ಳತನ ಪ್ರಕರಣಗಳಲ್ಲಿಯೂ ಆರೋಪಿಗಳುಭಾಗಿ ಆಗಿರುವುದು ವಿಚಾರಣೆಗೆ ಒಳಪಡಿಸಿದಾಗ ಪೊಲೀಸರಿಗೆ ತಿಳಿದು ಬಂದಿದೆ.
ಇಮ್ರಾನ್ ಪಾಷ ಮೇಲೆ ವಿವಿಧ ಠಾಣೆಗಳಲ್ಲಿ 31, ಶಬರೀಷ್ ಮೇಲೆ 28 ಮತ್ತು ಸಿಕಂದರ್ ಮೇಲೆ ಎರಡು ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ.