ಚಿಂತಾಮಣಿ: ತಾಲ್ಲೂಕಿನ ಬಡಗವಾರಹಳ್ಳಿ ಗ್ರಾಮದ ಬಳಿಯ ವ್ಯಸನ ಮತ್ತು ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದಲ್ಲಿ ಭಾನುವಾರ ಯುವಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪೋಷಕರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶ್ರೀನಿವಾಸಪುರದ ಆರನೇ ವಾರ್ಡ್ ಪ್ರಸಾದ್ ರಸ್ತೆಯ ಮಂಜುನಾಥ್ (22) ಮೃತಪಟ್ಟಿದ್ದರು. ಅವರ ತಂದೆ ಕೃಷ್ಣಪ್ಪ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಹಲ್ಲೆಯಿಂದ ಮೃತಪಟ್ಟಿದ್ದಾರೆ ಎಂದು ದೂರಿದ್ದಾರೆ.
ನಾವು ಆಸ್ಪತ್ರೆಗೆ ತೆರಳಿ ಮೃತ ಶರೀರವನ್ನು ಪರಿಶೀಲಿಸಿದಾಗ ಸೋಂಟ, ಮೊಣಕೈ ಹಾಗೂ ಎರಡು ಕುಂಡಿಗಳ ಮೇಲೆ ರಕ್ತ ಹೆಪ್ಪುಗಟ್ಟಿದೆ. ಚರ್ಮ ಕಿತ್ತು ಗಾಯಗಳಿದ್ದವು. ಕೇಂದ್ರದಲ್ಲಿ ದೈಹಿಕ ಹಿಂಸೆ ನೀಡಿರುವುದರಿಂದಲೇ ಮೃತಪಟ್ಟಿದ್ದಾನೆ. ಈ ಬಗ್ಗೆ ತನಿಖೆ ಕೈಗೊಂಡು ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಪುನರ್ವಸತಿ ಕೇಂದ್ರದಲ್ಲಿ ಮಾನಸಿಕ ತಜ್ಞರಿಲ್ಲ. ಕೇಂದ್ರದಲ್ಲಿ ತರಬೇತಿ ಪಡೆದ ಸಿಬ್ಬಂದಿಯೇ ಇಲ್ಲ. ಪುನರ್ವಸತಿ ಹೆಸರಿನಲ್ಲಿ ಕರೆದುಕೊಂಡು ಬಂದು ಹಿಂಸೆ ನೀಡುತ್ತಾರೆ. ತಪ್ಪಿತಸ್ಥರ ವಿರುದ್ಧ ಕಠಿಣಕ್ರಮಕೈಗೊಂಡು ನ್ಯಾಯ ಕೊಡಿಸಬೇಕು. ಮುಂದೆ ಯಾರಿಗೂ ಈ ರೀತಿ ಆಗದಂತೆ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.