ಶಿಡ್ಲಘಟ್ಟ: ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘಟನೆ ಒತ್ತಾಯಿಸಿದೆ.
ರೈತ ಮುಖಂಡನ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನಾ ಪದಾಧಿಕಾರಿಗಳು ಸೋಮವಾರ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಭಕ್ತರಹಳ್ಳಿ ಪ್ರತೀಶ್ ಅವರ ಮೇಲೆ ಇದೇ ಗ್ರಾಮದ ಉದಯ್ಕುಮಾರ್, ರಾಮಚಂದ್ರಪ್ಪ, ಹೇಮಂತ್, ಗೋವಿಂದಪ್ಪ, ಹಾಗೂ ನಂದೀಶ್ ಎಂಬುವವರು ಸೆ. 9ರಂದು ಬೆಳಗ್ಗೆ ಹಲ್ಲೆ ನಡೆಸಿದ್ದರು. ಹಲ್ಲೆ ತಡೆಯಲು ಬಂದ ಶಿವರಾಜ್ ಹಾಗೂ ಕುಟುಂಬದ ಮಹಿಳೆಯರ ಮೇಲೆ ಸಹ ಹಲ್ಲೆ ನಡೆಸಲಾಗಿತ್ತು.
ಈ ಘಟನೆ ನಡೆದು 10 ದಿನಗಳಾದರೂ, ಕೇವಲ ಇಬ್ಬರನ್ನು ಮಾತ್ರ ಬಂಧಿಸಲಾಗಿದೆ. ಹಲ್ಲೆಗೆ ಸುಫಾರಿ ನೀಡಿದವರು ಸೇರಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು.ಗಾಯಾಳು ಕುಟುಂಬಕ್ಕೆ ರಕ್ಷಣೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದರೆ, ರಾಜ್ಯದಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಪ್ರತಿಭಟನಕಾರರು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಘಟಕದ ಅಧ್ಯಕ್ಷ ಜಿ.ಎನ್.ವೆಂಕಟಲಕ್ಷ್ಮಯ್ಯ(ಬಾಬು), ಪದಾಧಿಕಾರಿಗಳಾದ ನಾರಾಯಣಸ್ವಾಮಿ, ಅಮರಾವತಿ, ಸುಲೋಚನ, ಪ್ರದೀಪ್ಕುಮಾರ್, ಡಿ.ವಿ.ನಾರಾಯಣಸ್ವಾಮಿ, ರಾಮಚಂದ್ರಪ್ಪ, ಶಾರದಮ್ಮ, ರತ್ನಮ್ಮ, ಆಂಜಿನಪ್ಪ, ಗಾಯಿತ್ರಿ, ಪ್ರಮೀಳಮ್ಮ ಹಾಜರಿದ್ದರು.