ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಭಯದ ನಡುವೆ ಲಕ್ಷ್ಮಿಗೆ ಭಕ್ತಿಯ ಆರಾಧನೆ

ಕೋವಿಡ್ ಕಾರಣಕ್ಕೆ ಸರಳ ಆಚರಣೆಗೆ ಸೀಮಿತಗೊಂಡ ವರಮಹಾಲಕ್ಷ್ಮೀ ಹಬ್ಬ
Last Updated 31 ಜುಲೈ 2020, 13:02 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲಿ ಒಂದಾದ ವರ ಮಹಾಲಕ್ಷ್ಮೀ ಹಬ್ಬವನ್ನು ಕೋವಿಡ್‌ ಭೀತಿಯ ನಡುವೆ ನಗರದಲ್ಲೆಡೆ ಶುಕ್ರವಾರ ಶ್ರದ್ಧಾಭಕ್ತಿಯಿಂದ ಸರಳವಾಗಿ ಆಚರಿಸಲಾಯಿತು.

ಮನೆ ಮನೆಗಳಲ್ಲಿ ದುಡ್ಡಿನ ಅಧಿದೇವತೆಯ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಹೆಣ್ಣುಮಕ್ಕಳು ಲಕ್ಷ್ಮಿ ದೇವಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು.

ಬೆಳಿಗ್ಗೆಯಿಂದಲೇ ಮನೆಗಳ ಮುಂದೆ ರಂಗೋಲಿ ಬಿಡಿಸಿ, ತೋರಣ ಕಟ್ಟಲಾಗಿತ್ತು. ಪೂಜಾ ಸ್ಥಳದಲ್ಲಿ ರಂಗೋಲಿ ಹಾಕಿ, ಬಾಳೆಕಂಬ, ಮಾವಿನ ಎಲೆಗಳಿಂದ ಸಿಂಗರಿಸಲಾಗಿತ್ತು. ಹೊಸ ಸೀರೆ, ಒಡವೆ ತೊಟ್ಟು ಓಡಾಡುತ್ತಿದ್ದ ಹೆಂಗಳೆಯರು ಲಕ್ಷ್ಮೀ ಮೂರ್ತಿಯ ಅಲಂಕಾರವನ್ನು ಮುತುವರ್ಜಿವಹಿಸಿ ಮಾಡುತ್ತಿದ್ದ ದೃಶ್ಯಗಳು ಕಂಡುಬಂದವು. ಕೆಲ ಮನೆಗಳಲ್ಲಿ ಬೆಳಿಗ್ಗೆಯಿಂದಲೇ ಭಕ್ತಿಗೀತೆಗಳ ಹಾಡುಗಳು ಕೇಳಿಬರುತ್ತಿದ್ದವು.

ಕೆಲವರು ಕಲಶದ ಮೇಲೆ ವಿವಿಧ ಲೋಹಗಳಿಂದ ಮಾಡಿದ ಲಕ್ಷ್ಮೀ ದೇವಿ ಮುಖವಾಡವನಿಟ್ಟು ಪೂಜಿಸಿದರೆ, ಹಲವರು ತೆಂಗಿನಕಾಯಿಗೆ ಹಳದಿಯ ಹಿಟ್ಟಿನಿಂದ ಮೂಗು ಕಣ್ಣು ಕಿವಿ ಮಾಡಿ, ಒಡವೆಗಳನ್ನು ಏರಿಸಿ, ಸೀರೆ ಉಡಿಸಿ, ಅಲಂಕಾರ ಮಾಡಿದ್ದರು.

ಮತ್ತೆ ಕೆಲವರು ಮಾರುಕಟ್ಟೆಯಲ್ಲಿ ಸಿದ್ಧವಾಗಿ ದೊರೆಯುವ ಮೂರ್ತಿಯನ್ನೇ ಪ್ರತಿಷ್ಠಾಪಿಸಿದ್ದರು. ಅಲಂಕೃತ ಮೂರ್ತಿಯ ಮುಂದೆ ಬಗೆಬಗೆಯ ಹಣ್ಣು, ತಿಂಡಿ, ತಿನಿಸು, ಬಾಗಿನ ವಸ್ತುಗಳನ್ನು ಇಟ್ಟು ಪೂಜೆ ಸಲ್ಲಿಸಿದರು.

ದೇವಿಯ ಮೂರ್ತಿಗೆ ಅರಿಶಿನ, ಕುಂಕುಮ, ಹೂವು, ಪತ್ರೆ ಮತ್ತು ಅಕ್ಷತೆಯೊಂದಿಗೆ ದ್ವಾದಶನಾಮಾವಳಿ ಹೇಳುತ್ತ ಪೂಜಿಸಿದ ಹೆಣ್ಣುಮಕ್ಕಳು ಹಿರಿಯರಿಂದ ಬಲಗೈಗೆ ಕಂಕಣ ಕಟ್ಟಿಸಿಕೊಂಡು ಪೂಜಾ ವಿಧಾನಗಳನ್ನು ಪೂರೈಸಿದರು.

ಸಮುದಾಯದ ಒಗ್ಗೂಡುವಿಕೆಯನ್ನೂ ಪ್ರದರ್ಶಿಸುವ ಈ ಹಬ್ಬದಲ್ಲಿ ಹೆಂಗಳೆಯರು ಪೂಜೆಯ ಬಳಿಕ ನೆರೆಹೊರೆಯವರು, ಸಂಬಂಧಿಗಳು, ಸ್ನೇಹಿತೆರು, ಮುತ್ತೈದೆಯರನ್ನು ಮನೆಗೆ ಆಹ್ವಾನಿಸಿ ಉಡಿ ತುಂಬುವುದು ಸಂಪ್ರದಾಯ.

ಪ್ರತಿ ಹಬ್ಬದಲ್ಲಿ ಕನಿಷ್ಠ 10–15 ಜನ ಸುಮಂಗಲಿಯರನ್ನು ಕರೆದು ಉಡಿದುಂಬುತ್ತಿದ್ದ ಮಹಿಳೆಯರು ಈ ಬಾರಿ ಸೋಂಕಿನ ಕಾರಣಕ್ಕೆ ಆಯ್ದ ಕೆಲವೇ ಜನರನ್ನು ಮನೆಗೆ ಆಹ್ವಾನಿಸಿ ಅರಿಶಿನ, ಕುಂಕುಮ ರವಿಕೆ ಬಟ್ಟೆ ಹಾಗೂ ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು ಕೊಟ್ಟು ಹಬ್ಬದ ಶಾಸ್ತ್ರ ಮುಗಿಸುತ್ತಿದ್ದ ದೃಶ್ಯಗಳು ಗೋಚರಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT