ಚಿಕ್ಕಬಳ್ಳಾಪುರ: ಅರಣ್ಯ ಇಲಾಖೆ ಹಾಗೂ ಪರಿಸರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಆಯೋಜಿಸಿರುವ ಮೂರು ದಿನಗಳ 6ನೇ ‘ಕರ್ನಾಟಕ ಹಕ್ಕಿ ಹಬ್ಬ’ಕ್ಕೆ ಶುಕ್ರವಾರ ತಾಲ್ಲೂಕಿನ ನಂದಿ ಗ್ರಾಮದ ಡಿಸ್ಕವರಿ ವಿಲೇಜ್ನಲ್ಲಿ ಚಾಲನೆ ನೀಡಲಾಯಿತು.
ಹಕ್ಕಿ ಹಬ್ಬದಲ್ಲಿ ರಾಜ್ಯದ ವಿವಿಧ ಮೂಲೆಯಿಂದ ಬಂದ 60 ಪಕ್ಷಿ ಪ್ರಿಯರು ಭಾಗವಹಿಸಿದ್ದಾರೆ. ಪಕ್ಷಿ ತಜ್ಞರಾದ ಕ್ರಿಸ್ ಬೌಡೆನ್ ಸೇರಿದಂತೆ ಅನೇಕ ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಲಿದ್ದಾರೆ. ಜತೆಗೆ ಪಕ್ಷಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಹಕ್ಕಿ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಅರಣ್ಯ ಸಚಿವ ಸಿ.ಸಿ.ಪಾಟೀಲ, ‘ಪಕ್ಷಿ ವೀಕ್ಷಣೆಯನ್ನು ಉತ್ತೇಜಿಸುವ ಮತ್ತು ಹುಲಿ, ಆನೆ ಕೇಂದ್ರೀತ ಪ್ರವಾಸೋದ್ಯಮದ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಹಕ್ಕಿ ಹಬ್ಬ ಆಯೋಜಿಸುತ್ತ ಬರಲಾಗುತ್ತಿದೆ’ ಎಂದು ಹೇಳಿದರು.
‘ಅರಣ್ಯ ಇಲಾಖೆಯು ₹1.60 ಕೋಟಿ ವೆಚ್ಚದಲ್ಲಿ ‘ಯರೆಬೂತ’ (ಗ್ರೇಟ್ ಇಂಡಿಯನ್ ಬಸ್ಟರ್ಡ್) ಪಕ್ಷಿಯನ್ನು ಆಮದು ಮಾಡಿಕೊಳ್ಳುತ್ತಿದೆ. ರಾಮನಗರದಲ್ಲಿ ಕ್ಷೀಣಿಸುತ್ತಿರುವ ರಣಹದ್ದುಗಳ ಸಂತತಿ ಉತ್ತೇಜಿಸಲು ₹1.30 ಕೋಟಿ ವೆಚ್ಚದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಸತ್ಯಪಾಲ್ ಸಿಂಗ್, ಶಾಸಕ ಡಾ.ಕೆ.ಸುಧಾಕರ್, ಪರಿಸರ ಪ್ರವಾಸೋದ್ಯಮ ಇಲಾಖೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಜಯ್ ಮೋಹನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.