ಗೌರಿಬಿದನೂರು: ನಗರ ಹೊರವಲಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶನಿವಾರ ಕೋವಿಡ್-19 ವಾರಿಯರ್ಸ್ಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಮತ್ತು ನಗರಸಭೆ ಅಧ್ಯಕ್ಷೆ ಕೆ.ಎಂ. ಗಾಯತ್ರಿ ಬಸವರಾಜ್ ಚಾಲನೆ ನೀಡಿದರು.
ಇದೇ ವೇಳೆ ತಾಲ್ಲೂಕು ಆರೋಗ್ಯ ಅಧಿಕಾರಿಗಳು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕುರೂಡಿ ಗ್ರಾಮದ ವರುಣ್ ಕುಮಾರ್ ಅವರಿಗೆ ಮೊದಲ ಕೋವಿಡ್ ಲಸಿಕೆ ವಿತರಿಸಿದರು.
ಶಾಸಕ ಶಿವಶಂಕರರೆಡ್ಡಿ ಮಾತನಾಡಿ, ಕೋವಿಡ್ ತುರ್ತು ಸಂದರ್ಭದಲ್ಲಿ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿರುವ ಸಿಬ್ಬಂದಿಗೆ ಮೊದಲ ಹಂತದ ಲಸಿಕೆ ನೀಡುತ್ತಿರುವುದು ಸಂತಸದ ವಿಚಾರ. ಇದರಿಂದ ಸಂಕಷ್ಟದ ಸಂದರ್ಭದಲ್ಲಿ ಕೈ ಹಿಡಿದಿರುವ ವಾರಿಯರ್ಸ್ಗೆ ಸಂಜೀವಿನಿ ನೀಡಿದಂತಾಗಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಗಾಯತ್ರಿ ಮಾತನಾಡಿ, ಕೋವಿಡ್ ತುರ್ತು ಸಂದರ್ಭದ ಆರಂಭದ ದಿನಗಳಲ್ಲಿ ಜನತೆಯನ್ನು ಸೋಂಕಿನಿಂದ ಸಂರಕ್ಷಿಸಲು ಹಗಲಿರುಳು ಶ್ರಮಿಸಿದ ನಗರಸಭೆ, ಗ್ರಾ.ಪಂ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯ ಸೇವೆಯನ್ನು ಚಿರಕಾಲ ಸ್ಮರಿಸಬೇಕಾಗಿದೆ. ಅವರೆಲ್ಲರ ಅವಿರತ ಸೇವೆಯಿಂದ ಇಂದು ಸಮಾಜದಲ್ಲಿ ಸಾಕಷ್ಟು ಜನತೆ ನೆಮ್ಮದಿಯಿಂದ ಬಾಳುವಂತಾಗಿದೆ. ಸರ್ಕಾರದ ನಿರ್ದೇಶನದಂತೆ ಮೊದಲ ಹಂತದ ಲಸಿಕೆ ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಮೊದಲ ದಿನವಾದ ಶನಿವಾರ ಸುಮಾರು 68 ಮಂದಿ ಆರೋಗ್ಯ ಸಿಬ್ಬಂದಿಗೆ ಸಂಜೀವಿನಿಯಾಗಿ ಕೋವಿಡ್ ಲಸಿಕೆ ನೀಡಲಾಗಿದೆ.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಓ. ರತ್ನಮ್ಮ, ಆಡಳಿತಾಧಿಕಾರಿ ಡಾ.ಶ್ರೀನಿವಾಸ್, ಸಿಪಿಐ ಎಸ್. ರವಿ, ವೈದ್ಯರಾದ ಡಾ.ಮುರಳೀಧರ್, ಡಾ.ರವಿಕುಮಾರ್, ಡಾ.ಜಮುನಾ, ಇಂದಿರಮ್ಮ, ಇಬ್ನಿ ಹಸನ್ ಇದ್ದರು.