ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹22 ಲಕ್ಷ ದರೋಡೆ: 7 ಮಂದಿ ಸೆರೆ

Last Updated 30 ಮೇ 2018, 19:51 IST
ಅಕ್ಷರ ಗಾತ್ರ

ಬೆಂಗಳೂರು: ‘ಮೈಸೂರ್ ಸ್ಯಾಂಡಲ್ ಸೋಪ್ ಫ್ಯಾಕ್ಟರಿ’ ಬಳಿ ಶ್ರೀನಿವಾಸ್ ಗುಪ್ತಾ ಎಂಬ ವ್ಯಾಪಾರಿಯ ಕಾರು ಅಡ್ಡಗಟ್ಟಿ ₹ 22 ಲಕ್ಷ ದೋಚಿದ್ದ ಪ್ರಕರಣದ ಸಂಬಂಧ, ಆ ವ್ಯಾಪಾರಿಯ ಮಾಜಿ ಕಾರು ಚಾಲಕ ಸೇರಿ ಆರು ಮಂದಿಯನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

‘ಕತ್ರಿಗುಪ್ಪೆಯ ಕಿರಣ್ ಅಲಿಯಾಸ್ ಮೆಡ್ಡ, ಹಾರೋಹಳ್ಳಿಯ ಪುನೀತ್, ಟಿ.ಜಿ. ಲೇಔಟ್‌ನ ಸುನಿಲ್, ಬೈರಸಂದ್ರದ ನವೀನ್, ಇಟ್ಟಮಡುವಿನ ಸಾಗರ್ ಅಲಿಯಾಸ್ ಕತ್ಲೆ, ಚಿಕ್ಕಲ್ಲ ಸಂದ್ರದ ಪುರುಷೋತ್ತಮ ಹಾಗೂ ಜಯನಗರದ ವರುಣ್ ಅಲಿಯಾಸ್ ಮುರ್ಕಿ ಎಂಬುವರನ್ನು ಬಂಧಿಸಿದ್ದೇವೆ. ಆರೋಪಿಗಳಿಂದ ₹ 13.66 ಲಕ್ಷ ನಗದು ಹಾಗೂ ಎರಡು ಬೈಕ್‌ಗಳನ್ನು ಜಪ್ತಿ ಮಾಡಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಕನಕಪುರ ರಸ್ತೆ ನಿವಾಸಿಯಾದ ಶ್ರೀನಿವಾಸ್ ಗುಪ್ತಾ, ಆರ್‌ಎಂಸಿ ಯಾರ್ಡ್‌ನಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದಾರೆ. ಇವರ ಕಾರು ಚಾಲಕನಾಗಿದ್ದ ಕಿರಣ್, ಮಾಲೀಕರು ತನ್ನ ತಂಗಿ ಮದುವೆಗೆ ಹಣಕಾಸಿನ ನೆರವು ನೀಡಲಿಲ್ಲ ಎಂಬ ಕಾರಣಕ್ಕೆ ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಬಳಿಕ ಗೆಳೆಯರ ಜತೆ ಸೇರಿ ಗುಪ್ತಾ ಅವರಿಂದ ಹಣ ದೋಚಲು ಸಂಚು ರೂಪಿಸಿದ್ದ.

ಮಾಲೀಕರು ಯಾವ ಸಮಯಕ್ಕೆ ಅಂಗಡಿಗೆ ಬರುತ್ತಾರೆ ಹಾಗೂ ಯಾವ ಸಮಯಕ್ಕೆ ಮನೆಗೆ ಹೊರಡುತ್ತಾರೆ ಎಂಬುದು ಕಿರಣ್‌ಗೆ ಗೊತ್ತಿತ್ತು. ಮೇ 14ರ ರಾತ್ರಿ 9.30ರ ಸುಮಾರಿಗೆ ಸಹಚರರನ್ನು ಕರೆದುಕೊಂಡು ಸ್ಯಾಂಡಲ್ ಸೋಪ್ ಫ್ಯಾಕ್ಟರಿಯ ಹಿಂಭಾಗದ ರಸ್ತೆಗೆ ತೆರಳಿದ್ದ ಆತ, ಗುಪ್ತಾ ಅವರ ಬರುವಿಕೆಗಾಗಿ ಕಾಯುತ್ತಿದ್ದ.

9.50ಕ್ಕೆ ಅವರ ಕಾರು ಬರುತ್ತಿ ದ್ದಂತೆಯೇ ಕಿರಣ್ ತಂಡ ದಾಳಿ ನಡೆಸಿತ್ತು. ಮಂಕಿ ಕ್ಯಾಪ್ ಧರಿಸಿದ್ದ ಅರೋಪಿಗಳು, ಮುಖಕ್ಕೆ ಖಾರದ ‍ಪುಡಿ ಎರಚಿ ಹಣದ ಬ್ಯಾಗ್‌ ಕಿತ್ತುಕೊಂಡು ಪರಾರಿಯಾಗಿದ್ದರು. ನಂತರ ಗುಪ್ತಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.

‘ಟವರ್ ಡಂಪ್’ ತನಿಖೆ
‘ಪರಿಚಿತರೇ ಕೃತ್ಯ ಎಸಗಿರಬಹುದು ಎಂಬ ಅನುಮಾನ ವ್ಯಕ್ತವಾಯಿತು. ತಮಗೆ ಯಾರ ಮೇಲಾದರೂ ಅನುಮಾನವಿದೆಯೇ ಎಂದು ದೂರುದಾರರನ್ನು ಕೇಳಿದಾಗ, ‘ತಂಗಿ ಮದುವೆಗೆ ಹಣ ಕೊಡಲಿಲ್ಲವೆಂದು ಕಿರಣ್ ಸಿಟ್ಟಾಗಿದ್ದ. ಅವನೇ ಈ ಕೆಲಸ ಮಾಡಿರಬಹುದು’ ಎಂದು ಸಂಶಯ ವ್ಯಕ್ತಪಡಿಸಿದರು. ಬಳಿಕ ಆತನ ಮೊಬೈಲ್ ಸಂಖ್ಯೆ ಪಡೆದು, ‘ಟವರ್ ಡಂಪ್’ ತನಿಖೆ ಪ್ರಾರಂಭಿಸಿದೆವು. ಆಗ, ದರೋಡೆ ನಡೆದ ಸಮಯದಲ್ಲಿ ಕಿರಣ್‌ನ ಮೊಬೈಲ್ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಬಳಿಯ ಟವರ್‌ನಿಂದಲೇ ಸಂಪರ್ಕ ಪಡೆದಿದ್ದುದು ಗೊತ್ತಾಯಿತು’ ಎಂದು ತನಿಖಾಧಿಕಾರಿಗಳು ವಿವರಿಸಿದರು.

‘ಕಿರಣ್‌ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪ‍ಡಿಸಿದಾಗ ತಪ್ಪೊಪ್ಪಿಕೊಂಡ. ಆತ ನೀಡಿದ ಮಾಹಿತಿ ಆಧರಿಸಿ ಉಳಿದವರನ್ನೂ ಪತ್ತೆ ಮಾಡಲಾಯಿತು. ದರೋಡೆ ಮಾಡಿದ್ದ ಹಣವನ್ನು ಆರೋಪಿಗಳು ಸಮನಾಗಿ ಹಂಚಿಕೊಂಡಿದ್ದರು. ಕಿರಣ್, ತಂಗಿಯ ಮದುವೆಗೆ ಮಾಡಿದ್ದ ಸಾಲವನ್ನು ತೀರಿಸಿಕೊಂಡಿದ್ದ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT