ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಸಮಸ್ಯೆ ಮುಕ್ತಿಗೆ ‘ಮೆಶ್ ಕಾಂಪೋಸ್ಟ್‌ ಘಟಕ’

ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸ್ಥಳದಲ್ಲಿಯೇ ಸಾವಯವ ಗೊಬ್ಬರವಾಗಿ ಪರಿವರ್ತಿಸಲು ಜಿಲ್ಲಾಡಳಿತದ ಚಿಂತನೆ
Last Updated 18 ಜುಲೈ 2019, 19:34 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತ್ಯಾಜ್ಯದ ಸಮಸ್ಯೆ ತಹಬದಿಗೆ ತರುವ ನಿಟ್ಟಿನಲ್ಲಿ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿರುವ ಜಿಲ್ಲಾಡಳಿತ ಇದೀಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಸಾರ್ವಜನಿಕ ಸ್ಥಳಗಳಲ್ಲಿ ಸಂಗ್ರಹವಾಗುವ ಕಸವನ್ನು ಆಯಾ ಸ್ಥಳದಲ್ಲಿಯೇ ವೈಜ್ಞಾನಿಕ ರೀತಿಯಲ್ಲಿ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಲು ಚಿಂತನೆ ನಡೆಸಿದೆ.

ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಸದ ಸಮಸ್ಯೆಗೆ ಮುಕ್ತಿ ಕಂಡುಕೊಳ್ಳಲು ಮುಂದಾಗಿರುವ ಜಿಲ್ಲಾಡಳಿತ ಅದರ ಪೂರ್ವಭಾವಿಯಾಗಿ ಬೆಂಗಳೂರು ‘ಹಸಿರುದಳ’ ಎನ್‌ಜಿಒ ಹಾಗೂ ‘ಮಣ್ಣು ಮತ್ತು ಆರೋಗ್ಯ’ ಕಂಪನಿ ಸಹಯೋಗದಲ್ಲಿ ಜಿಲ್ಲಾಧಿಕಾರಿ ಅವರ ಸರ್ಕಾರಿ ನಿವಾಸದ ಆವರಣದಲ್ಲಿ ಪ್ರಾಯೋಗಿಕವಾಗಿ ಎರಡು ‘ಮೆಶ್ ಕಾಂಪೋಸ್ಟ್‌ ಘಟಕ’ಗಳನ್ನು ಅಳವಡಿಸಿದೆ.

ಒಂದೆಡೆ ನಗರದಲ್ಲಿ ಬೇಕಾಬಿಟ್ಟಿ ತ್ಯಾಜ್ಯ ಸುರಿಯುವವರಿಗೆ ದಂಡ ವಿಧಿಸುವುದು, ಇನ್ನೊಂದೆಡೆ ನಗರ, ಪಟ್ಟಣ ವ್ಯಾಪ್ತಿಯ ಪ್ರತಿ ಮನೆಗೆ ಎರಡು ಬಕೆಟ್‌ಗಳನ್ನು ನೀಡಿ ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಂಗಡಿಸಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವುದಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.

ಅದರ ಮುಂದುವರಿದ ಭಾಗವಾಗಿ ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳು, ದೇವಾಲಯ, ಉದ್ಯಾನ, ವಸತಿ ನಿಲಯಗಳ ಆವರಣ ಹೀಗೆ ಎಲ್ಲೆಲ್ಲಿ ಹೆಚ್ಚಿನ ತ್ಯಾಜ್ಯ ಉತ್ಪಾದನೆ ಆಗುತ್ತದೋ ಅಲ್ಲೆಲ್ಲ ‘ಮೆಶ್ ಕಾಂಪೋಸ್ಟ್‌ ಘಟಕ’ ಸ್ಥಾಪಿಸಲು ಜಿಲ್ಲಾಡಳಿತ ಉದ್ದೇಶಿಸಿದೆ.

‘ಈ ಹಿಂದೆ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಕೆಲ ತಿಂಗಳು ಕೆಲಸ ಮಾಡಿದ ಅನುಭವ ಇರುವುದರಿಂದ ನನಗೆ ಮೊದಲಿನಿಂದಲೂ ತ್ಯಾಜ್ಯ ನಿರ್ವಹಣೆಯ ಹೊಸ ತಂತ್ರಜ್ಞಾನಗಳ ಬಗ್ಗೆ ಆಸಕ್ತಿ ಇದೆ. ಬೆಂಗಳೂರಿನಲ್ಲಿ ಅನೇಕ ಕಡೆಗಳಲ್ಲಿ ಅಳವಡಿಸಿದ್ದ ‘ಮೆಶ್ ಕಾಂಪೋಸ್ಟ್‌ ಘಟಕ’ಗಳನ್ನು ನೋಡಿದ ಮೇಲೆ ಜಿಲ್ಲೆಯಲ್ಲೂ ಏಕೆ ಇಂತಹದೊಂದು ಪ್ರಯೋಗ ಮಾಡಬಾರದು ಎಂಬ ಯೋಚನೆ ಬಂತು’ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹೇಳಿದರು.

‘ಈ ಯೋಜನೆಯ ಸಾಧಕ, ಬಾಧಕ ಪರೀಕ್ಷಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಏಕಾಏಕಿ ಘಟಕಗಳನ್ನು ಅಳವಡಿಸಿದರೆ ನಾಗರಿಕರಿಂದ ದೂರುಗಳು ಬರಬಹುದು ಎಂಬ ಕಾರಣಕ್ಕೆ ಮೊದಲಿಗೆ ಜಿಲ್ಲಾಧಿಕಾರಿ ನಿವಾಸದ ಆವರಣದಲ್ಲಿಯೇ ಘಟಕವನ್ನು ಅಳವಡಿಸಿದ್ದೇವೆ. ಈ ಹಿಂದೆ ಜಿಲ್ಲಾಧಿಕಾರಿ ನಿವಾಸ ಮತ್ತು ಸುತ್ತಮುತ್ತಲಿನ ಸರ್ಕಾರಿ ನಿವೇಶನಗಳಲ್ಲಿ ಸಂಗ್ರಹವಾಗುತ್ತಿದ್ದ ತ್ಯಾಜ್ಯ ಮತ್ತು ಉದುರಿ ಬಿದ್ದ ಎಲೆ, ಹೂವುಗಳನ್ನು ಸುಡುತ್ತಿದ್ದರು. ಇದೀಗ ಆ ತ್ಯಾಜ್ಯವನ್ನು ನಾವು ಗೊಬ್ಬರವಾಗಿ ಪರಿವರ್ತಿಸಲು ನಿರ್ಧರಿಸಿದ್ದೇವೆ’ ಎಂದರು.

‘ಮುಂಬರುವ ದಿನಗಳಲ್ಲಿ ತಾಲ್ಲೂಕಿನ ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯ, ಜಿಲ್ಲಾಡಳಿತ ಭವನ, ಜಿಲ್ಲಾ ಕೇಂದ್ರ ಗ್ರಂಥಾಲಯ ಸೇರಿದಂತೆ ಪ್ರಮುಖ ಉದ್ಯಾನಗಳಲ್ಲಿ ‘ಮೆಶ್ ಕಾಂಪೋಸ್ಟ್‌ ಘಟಕ’ಗಳನ್ನು ಅಳವಡಿಸುವ ಮೂಲಕ ಆಯಾ ಪರಿಸರದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಅಲ್ಲಿಯೇ ವೈಜ್ಞಾನಿಕ ರೀತಿಯಲ್ಲಿ ಗೊಬ್ಬರ ಮಾಡಿ ಕಸದ ಸಮಸ್ಯೆಗೆ ಮುಕ್ತಿ ಕಂಡುಕೊಳ್ಳಲು ಚಿಂತನೆ ನಡೆಸಿದ್ದೇವೆ’ ಎಂದು ತಿಳಿಸಿದರು.

‘ದಿನೇ ದಿನೇ ತ್ಯಾಜ್ಯ ನಿರ್ವಹಣೆ ಸವಾಲುಗಳನ್ನು ಒಡ್ಡುತ್ತಿದೆ. ಆದ್ದರಿಂದ ಮನೆಯ ಹಂತದಲ್ಲಿಯೇ ಕಸಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡಿ, ಆ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸಹ ಉದ್ದೇಶಿಸಿದ್ದೇವೆ. ಅದರಿಂದಾಗಿ ಮುಂದಿನ ನಾಲ್ಕೈದು ವರ್ಷಗಳಲ್ಲಿ ಯುವಜನರಲ್ಲಿ ತ್ಯಾಜ್ಯದ ಬಗ್ಗೆ ಜವಾಬ್ದಾರಿ ಮೂಡಲಿದೆ ಎಂಬುದು ನಮ್ಮ ಆಶಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT