ಗೌರಿಬಿದನೂರು: ನಗರದ ವ್ಯಕ್ತಿಯೊಬ್ಬರಿಗೆ ಕೋವಿಡ್–19 ಸೋಂಕು ತಗುಲಿದ್ದು ಪತ್ತೆಯಾದ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ಭಾನುವಾರ ನಗರಸಭೆ ಅಧಿಕಾರಿಗಳು ಮಸೀದಿ, ದೇವಸ್ಥಾನ ಮತ್ತು ಚರ್ಚ್ಗಳಿಗೆ ಬೀಗ ಹಾಕಿಸಿದರು.
ನಗರಸಭೆ ಆಯುಕ್ತ ಜಿ.ಎನ್.ಚಲಪತಿ ನೇತೃತ್ವದ ಅಧಿಕಾರಿಗಳ ತಂಡ ನಗರದಲ್ಲಿನ 12 ಮಸೀದಿಗಳು, 18 ದೇವಸ್ಥಾನಗಳು ಹಾಗೂ ನಾಲ್ಕು ಚರ್ಚ್ಗಳ ಸುತ್ತ ಭಾನುವಾರ ಸೋಂಕು ನಾಶಕ ದ್ರಾವಣ ಸಿಂಪಡಿಸಿ, ಮುಂದಿನ ಆದೇಶದವರೆಗೂ ಬಾಗಿಲು ತೆರೆಯದಂತೆ ಸೂಚಿಸಿದರು.
ಕೋವಿಡ್–19 ಸೋಂಕಿತರ ಸಂಪರ್ಕಕ್ಕೆ ಬಂದ ಶಂಕೆಯ ಮೇಲೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ತಪಾಸಣೆಗೆ ಕರೆತಂದಿದ್ದ ಸುಮಾರು 20 ಜನರನ್ನು ಆಸ್ಪತ್ರೆಗೆ ಬಿಡುಗಡೆ ಮಾಡಿ ಮನೆ ಕಳುಹಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು 14 ದಿನಗಳ ಕಾಲ ಇತರರೊಂದಿಗೆ ಬೆರೆಯದಂತೆ ಮನೆಯಲ್ಲಿಯೇ ಗೃಹ ಬಂಧನದಲ್ಲಿ ಇರುವುವಂತೆ ಸೂಚಿಸಿದರು.