ಚಿಕ್ಕಬಳ್ಳಾಪುರ: ‘ಕೊರೊನಾ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಿಸಿದ ಪ್ಯಾಕೇಜ್ ಅನ್ನು ಇಡೀ ದೇಶವೇ ಮೆಚ್ಚಿಕೊಂಡಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಟೀಕೆ ಮಾಡುವುದರಲ್ಲಿಯೇ ತೃಪ್ತಿ ಕಾಣಲಿ’ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ತಾಲ್ಲೂಕಿನ ಗಾವಿಗಾನಹಳ್ಳಿಯಲ್ಲಿ ಮಂಗಳವಾರ ಅಂತರ್ಜಲ ಚೇತನ ಯೋಜನೆಗೆ ಚಾಲನೆ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದವರು. ಪ್ರಧಾನಮಂತ್ರಿ ಅವರು ಏನೇ ಮಾಡಿದರೂ ಅದನ್ನು ಟೀಕೆ ಮಾಡುವುದು ಅವರ ಕರ್ತವ್ಯ’ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಕುಮಾರಸ್ವಾಮಿ ಅವರ ಟೀಕೆಯನ್ನು ಒಳ್ಳೆಯ ಮಾರ್ಗದರ್ಶನ ಎಂದು ಭಾವಿಸಿ ಮತ್ತಷ್ಟು ಒಳ್ಳೆಯ ಕೆಲಸ ಮಾಡುತ್ತೇವೆ. ಟೀಕೆ ಮಾಡಿರುವುದು ಸರಿಯೋ, ತಪ್ಪೋ ಎಂದು ತೀರ್ಮಾನಿಸುವುದು ರಾಜ್ಯದ ಜನರಿಗೆ ಬಿಡುತ್ತೇನೆ’ಎಂದು ಹೇಳಿದರು.
‘ಕೊರೊನಾ ಎದುರಿಸುವಲ್ಲಿ ಯಶಸ್ವಿಯಾದ ಮೊದಲ ನಾಯಕ ಎಂದು ಮೋದಿ ಅವರನ್ನು ವಿಶ್ವವೇ ಹೊಗಳುತ್ತಿದೆ. ರಾಜ್ಯದಲ್ಲೂ ಮೋದಿ ಅವರ ಕೆಲಸಕ್ಕೆ ಹೆಗಲು ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ಕರ್ನಾಟಕದ ಮೋದಿ ಕರೆಯಲು ಇಷ್ಟಪಡುವೆ’ಎಂದರು.