ಚಿಕ್ಕಬಳ್ಳಾಪುರ: ‘ಮನುಷ್ಯನಿಗೆ ಕೆಲಸಕ್ಕಿಂತ ಉತ್ತಮ ಆರೋಗ್ಯ ಮುಖ್ಯ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ಭಾಗವಹಿಸುವ ಮೂಲಕ ಆರೋಗ್ಯ ಕಾಪಾಡಿಕೊಂಡು, ಚುರುಕಾಗಿ ಕೆಲಸ ಮಾಡಬೇಕು’ ಎಂದು ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ತಿಳಿಸಿದರು.
ನಗರದ ಹೊರವಲಯದ ಕೆ.ವಿ.ಕ್ಯಾಂಪಸ್ನಲ್ಲಿ 23 ನೇ ದತ್ತಿ ಜಯಂತಿ ಅಂಗವಾಗಿ ಶನಿವಾರ ದತ್ತಿ ಸಿಬ್ಬಂದಿಗೆ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಆಧುನಿಕ ಜೀವನ ಶೈಲಿಯಲ್ಲಿ ಮಾನಸಿಕ ಒತ್ತಡ ಎಲ್ಲರಿಗೂ ಸಾಮಾನ್ಯ ಎಂಬಂತಾಗಿದೆ. ಇದನ್ನು ಹಾಗೇ ಬಿಟ್ಟರೆ ಮುಂದೆ ಗಂಭೀರ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳುವುದು ಇಂದಿನ ಅಗತ್ಯ. ಅದಕ್ಕಾಗಿ ಪ್ರತಿ ನಿತ್ಯ ವ್ಯಾಯಾಮ, ಯೋಗ ಅಭ್ಯಾಸ ರೂಢಿಸಿಕೊಳ್ಳುವ ಮೂಲಕ ಸದೃಢವಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ವಾಲಿಬಾಲ್, ರಂಗೋಲಿ, ಓಟದ ಸ್ಪರ್ಧೆ, ಥ್ರೋಬಾಲ್, ಕ್ರಿಕೆಟ್ ಸೇರಿದಂತೆ ವಿವಿಧ ಆಟಗಳಲ್ಲಿ ದತ್ತಿ ಸಿಬ್ಬಂದಿ ಪಾಲ್ಗೊಂಡಿದ್ದರು. ಕೆ.ವಿ ಮತ್ತು ಪಂಚಗಿರಿ ದತ್ತಿ ಸದಸ್ಯರಾದ ಬಿ.ಮುನಿಯಪ್ಪ, ಯಾಸೀನ್ ಖಾನ್, ಲೀಲಾ ದೇವರಾಜ್, ನಿರ್ಮಲಾಪ್ರಭು ಹಾಜರಿದ್ದರು.