ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಂಗಳವಾರ ರಾತ್ರಿ ಉತ್ತಮ ಮಳೆಯಾಗಿದೆ.
ಮಂಗಳವಾರ ಸಂಜೆಯೇ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ತಾಲ್ಲೂಕಿನಲ್ಲಿ ಮಳೆ ಆರಂಭವಾಗಿತ್ತು. ರಾತ್ರಿ ಮತ್ತಷ್ಟು ಬಿರುಸು ಪಡೆಯಿತು.
ನಂದಿಬೆಟ್ಟಕ್ಕೆ ಸಾಗುವ ರಸ್ತೆಯ ಬದಿ ದಿಬ್ಬ ಕುಸಿದಿದ್ದು, ಸಂಚಾರಕ್ಕೆ ಬಂದ್ ಆಗಿದೆ. ನಂದಿಕ್ರಾಸ್ ಬಳಿ ಬಸ್ ನೀರಿನಲ್ಲಿ ಸಿಲುಕಿದೆ. ಹೊಲ ಮತ್ತು ತೋಟಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ತುಂಬಿದೆ.
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ದಕ್ಷಿಣ ಪಿನಾಕಿನಿ ನದಿಯ ಕಾಲುವೆ ತುಂಬಿ ಹರಿಯುತ್ತಿದೆ.
ಗೌರಿಬಿದನೂರು ತಾಲ್ಲೂಕಿನ ಅಲಕಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಗಾನಹಳ್ಳಿ ಬಳಿ ಉತ್ತರ ಪಿನಾಕಿನಿ ನದಿ ಮೈದುಂಬಿ ಹರಿಯುತ್ತಿದೆ.
ಗುಡಿಬಂಡೆ ತಾಲ್ಲೂಕಿನ ಕಲ್ಲಿನಾಯಕನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿದ ಮಳೆಗೆ ಹೊಲ, ತೋಟಗಳಲ್ಲಿ ನೀರು ನಿಂತಿದೆ. ಕೆರೆ, ಕಟ್ಟೆಗಳು ಭರ್ತಿಯಾಗಿವೆ