ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನೈತಿಕ ‌ಸಂಬಂಧ 6 ವರ್ಷದ ಮಗು ಬಲಿ; ಪ್ರಿಯತಮನಿಂದ ಕಿಡ್ನಾಪ್‌, ಕೊಲೆ

Last Updated 30 ಮಾರ್ಚ್ 2021, 3:06 IST
ಅಕ್ಷರ ಗಾತ್ರ

ಗೌರಿಬಿದನೂರು: ಅನೈತಿಕ ಸಂಬಂಧ ಮುಂದುವರೆಸಲಿಲ್ಲ ಎಂಬ ಕಾರಣಕ್ಕೆ ಪ್ರಿಯತಮೆಯ ಮಗನನ್ನು ಕಿಡ್ನಾಪ್ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿರುವುದು ತಾಲ್ಲೂಕಿನ ವಾಟದಹೊಸಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ನಾರಾಯಣಸ್ವಾಮಿ ಮತ್ತು ಪ್ರಭಾವತಿ ದಂಪತಿಯ 6 ವರ್ಷದ ಮಗು ವಿಷ್ಣುವರ್ಧನ್ ಹತ್ಯೆಯಾದ ಬಾಲಕ. ಆಂಧ್ರ ಗಡಿಭಾಗದ ಸಾದಾರ‍್ಲಹಳ್ಳಿ ಬಳಿ ಮಗುವಿನ ತಲೆಬುರುಡೆ, ಮೂಳೆಗಳು ಹಾಗೂ ಅರೆಬರೆ‌ ಬಟ್ಟೆಗಳು ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ಮಾರ್ಚ್ 16ರಂದು ನಿಗೂಢವಾಗಿ ನಾಪತ್ತೆಯಾಗಿದ್ದ ಮಗು ವಿಷ್ಣುವರ್ಧನ್‌ನ ದೇಹ 13 ದಿನಗಳ ನಂತರ ಅವಶೇಷಗಳೊಂದಿಗೆ ಪತ್ತೆಯಾಗಿದೆ. ವಾಟದಹೊಸಹಳ್ಳಿ ಗ್ರಾಮದ ರಾಮಾಂಜಿ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ರಾಮಾಂಜಿಗೂ ಕೊಲೆಯಾದ ಮಗುವಿನ ತಾಯಿ ಪ್ರಭಾವತಿಗೂ ಬಹಳ ದಿನಗಳಿಂದ ಅನೈತಿಕ ಸಂಬಂಧವಿದ್ದು, ಇತ್ತೀಚೆಗೆ ರಾಮಾಂಜಿ ಸಹವಾಸದಿಂದ ದೂರ ಉಳಿದಿದ್ದರು. ಆದರೆ ಪ್ರಭಾವತಿಯನ್ನು ಬಿಡಲು ಮನಸ್ಸಿಲ್ಲದ ರಾಮಾಂಜಿ‌ ಅನೇಕ ಬಾರಿ ಕಾಡತೊಡಗಿದ್ದ. ಆದರೆ ಆಕೆ ಬಗ್ಗಲಿಲ್ಲ. ಇದರಿಂದ ರಾಮಾಂಜಿ ಆಕೆಯ ಮಗುವನ್ನು ಕಿಡ್ನಾಪ್ ಮಾಡಿದ್ದಾನೆ. ಆದರೂ ಆಕೆ ಬಗ್ಗದಿದ್ದಾಗ ಮಗುವನ್ನು ಕತ್ತು ಹಿಸುಕಿ ಸಾಯಿಸಿ ಕೊಂದಿದ್ದಾನೆ. ಮಗು ಕಾಣೆಯಾಗಿದೆ ಹುಡುಕಿ ಕೊಡಿ ಎಂದು ಪ್ರಭಾವತಿ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪೊಲೀಸರು 17ರಂದು ಮಗು ಕಾಣೆಯಾದ ಬಗ್ಗೆ ದೂರು ದಾಖಲು ಮಾಡಿಕೊಂಡು ತನಿಖೆ ನಡೆಸಿದಾಗ ಮಗು ಹತ್ಯೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಗ್ರಾಮಾಂತರ ಠಾಣೆಯಲ್ಲಿ ಮಗು ಕಾಣೆಯಾಗಿರುವ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ರಾಮಾಂಜಿ, ಮಗುವಿನ ಶವವನ್ನು ವಾಟದಹೊಸಹಳ್ಳಿ ಗ್ರಾಮದಿಂದ ತೆಗೆದುಕೊಂಡು ಹೋಗಿ ಆಂಧ್ರ ಗಡಿಭಾಗದ ಸಾದಾರ‍್ಲಹಳ್ಳಿ ಗ್ರಾಮದ ಬಳಿ ನಿರ್ಜನ ಪ್ರದೇಶದಲ್ಲಿ ಬಿಸಾಡಿದ್ದ. ಅನುಮಾನದ ಮೇರೆಗೆ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT