ಚಿಂತಾಮಣಿ: ನಗರದಲ್ಲಿ ಸುಮಾರು ₹2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬೆಸ್ಕಾಂ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್ ಕಚೇರಿಯ ನೂತನ ಕಟ್ಟಡವನ್ನು ಶಾಸಕ ಎಂ.ಕೃಷ್ಣಾರೆಡ್ಡಿ ಗುರುವಾರ ಉದ್ಘಾಟನೆ ಮಾಡಿದರು.
‘ಸುಸಜ್ಜಿತವಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಹಿಂದೆ ಬಾಡಿಗೆ ಕಟ್ಟಡದಲ್ಲಿ ಕಚೇರಿ ಕೆಲಸ ಮಾಡುತ್ತಿತ್ತು. ಹೊಸ ಕಟ್ಟಡ ನಿರ್ಮಾಣ ವಾಗಿರುವುದರಿಂದ ಬಾಡಿಗೆ ನೀಡಲು ಬೆಂಗಳೂರು ಬೆಸ್ಕಾಂ ಕಂಪನಿಯು ತಗಾದೆ ವ್ಯಕ್ತಪಡಿಸಿತ್ತು. ಹೀಗಾಗಿ ಶೀಘ್ರವಾಗಿ ಉದ್ಘಾಟನೆ ಮಾಡಬೇಕಾಯಿತು’ ಎಂದು ಶಾಸಕರು ತಿಳಿಸಿದರು.
ಪ್ರತಿಭಟನೆ: ಸಂಸದರನ್ನು ಕಡೆಗಣಿಸಿ ಉದ್ಘಾಟನೆ ಕಾರ್ಯಕ್ರಮ ನಡೆಸಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಸಂಸದರ ಬೆಂಬಲಿಗರು ಪ್ರತಿಭಟನೆ ನಡೆಸಿದರು.
‘ಕಾರ್ಯಕ್ರಮವನ್ನು ಬೆಳಿಗ್ಗೆ ನಿಗದಿಪಡಿಸಿದ್ದರು. ಸಂಸದರು ಬೆಂಗಳೂರಿನಿಂದ ಬರುವುದು ಅರ್ಧ ಗಂಟೆ ತಡವಾಗಿರಬಹುದು. ಸ್ವಲ್ಪ ಹೊತ್ತು ಕಾಯದೆ ಶಿಷ್ಟಾಚಾರವನ್ನು ಕಡೆಗಣಿಸಿ ಉದ್ಘಾಟನೆ ಮಾಡಿರುವುದು ಖಂಡನೀಯ. ಅಧಿಕಾರಿಗಳು ಶಾಸಕರಿಗೆ ಮನವರಿಕೆ ಮಾಡಿಕೊಡಬೇಕಾಗಿತ್ತು. ಏಕಪಕ್ಷೀಯವಾಗಿ ನಡೆದುಕೊಂಡಿರುವುದು ಖಂಡನೀಯ’ ಎಂದು ಬಿಜೆಪಿ ಕಾರ್ಯದರ್ಶಿ ಗುಟ್ಟಹಳ್ಳಿ ಮಂಜುನಾಥ್ ಅಸಮದಾನ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ನಡಂಪಲ್ಲಿ ಶ್ರೀನಿವಾಸ್ ಮಾತನಾಡಿ, ‘ತಾಲ್ಲೂಕಿನಲ್ಲಿ ಶಾಸಕರನ್ನು ಹೊರತುಪಡಿಸಿ ಇತರೆ ಜನಪ್ರತಿನಿಧಿಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರು, ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಗಮನಕ್ಕೇ ತೆಗೆದುಕೊಳ್ಳುತ್ತಿಲ್ಲ. ಅವರು ಜನಗಳಿಂದ ಆಯ್ಕೆಯಾಗಿ ಬಂದಿರುವ ಜನಪ್ರತಿನಿಧಿಗಳು. ಶಿಷ್ಟಾಚಾರದ ಪಾಲನೆಯಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದು ದೂರಿದರು.