ಗೌರಿಬಿದನೂರು: ಮನುಷ್ಯ ಮತ್ತು ಜೀವಸಂಕುಲ ಉಳಿಸಲು ಸರ್ಕಾರ ಅರಣ್ಯ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ ಎಂದು ಜಿಲ್ಲಾ ವಿಶ್ವೇಶ್ವರಯ್ಯ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎಚ್.ಆರ್. ಗೋವಿಂದರಾಜು ತಿಳಿಸಿದರು.
ನಗರ ಹೊರವಲಯದ ಶ್ರೀರಾಮಕೃಷ್ಣ ಶಾರದಾ ದೇವಿ ವಿದ್ಯಾಮಂದಿರ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.
40 ವರ್ಷಗಳ ಹಿಂದೆ ಭೂಮಿ ಮೇಲೆ ಶೇ 70ರಷ್ಟು ಅರಣ್ಯವಿತ್ತು. ಆದರೆ, ಮನುಷ್ಯನ ದುರಾಸೆ ಮತ್ತು ಸ್ವಾರ್ಥದಿಂದ ಮರಗಳನ್ನು ಕಡಿದು ಅರಣ್ಯ ನಾಶ ಮಾಡಿರುವ ಪರಿಣಾಮ ಮಳೆ, ನೀರು, ಆಹಾರದ ಕೊರತೆ ಉಂಟಾಗಿ ಜನರಲ್ಲಿ ಅನಾರೋಗ್ಯ ಹೆಚ್ಚುತ್ತಿದೆ ಎಂದರು.
ಕಾಡಿನಲ್ಲಿದ್ದ ಪ್ರಾಣಿಗಳು ಗ್ರಾಮಗಳಿಗೆ ದಾಳಿ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಘರ್ಷ ತಪ್ಪಿಸಲು ಸರ್ಕಾರ ವೈಜ್ಞಾನಿಕ ರೀತಿಯಲ್ಲಿ ಆಲೋಚಿಸಿ ಹೆಚ್ಚು ಹೆಚ್ಚಾಗಿ ಅರಣ್ಯ ಬೆಳೆಸಲು ಆದ್ಯತೆ ನೀಡಬೇಕಾಗಿದೆ ಎಂದು ತಿಳಿಸಿದರು.
ಶಾಲೆಯ ಮುಖ್ಯಸ್ಥ ವಿ.ಡಿ. ಗಣೇಶ್ ಅಧ್ಯಕ್ಷತೆವಹಿಸಿದ್ದರು. ಪ್ರಾಂಶುಪಾಲ ಶರ್ಮ, ಸಂಚಾಲಕರಾದ ಪ್ರಕಾಶ್, ಮೈತ್ರಿ ಉಪಸ್ಥಿತರಿದ್ದರು.