ಶಿಡ್ಲಘಟ್ಟ: ‘ಕನ್ನಡ ಅನ್ನದ ಭಾಷೆ, ನಮ್ಮ ಶ್ರಮದ ಭಾಷೆ. ಅದನ್ನು ನಾವು ಬಳಸಿ ಬೆಳೆಸದಿದ್ದರೆ ಕನ್ನಡಕ್ಕೆ ಉಳಿಗಾಲವಿಲ್ಲ’ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಎ.ಎಂ. ತ್ಯಾಗರಾಜ್ ತಿಳಿಸಿದರು.
ನಗರದ ಸಿ.ಆರ್. ಲೇಔಟ್ನ ರಾಜ್ಯ ಸರ್ ಎಂ.ವಿ. ಕಾರ್ಮಿಕರ ಸೇವಾ ಸಂಘದ ತಾಲ್ಲೂಕು ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಗುರುತಿನಚೀಟಿ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ ಎಂ.ವಿ. ಕಾರ್ಮಿಕರ ಸೇವಾ ಸಂಘದ ರಾಜ್ಯ ಉಪಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಕಾರ್ಮಿಕರ ಹಕ್ಕುಗಳು, ಕಾರ್ಮಿಕ ಸಂಘಗಳ ಉದ್ದೇಶ ಕುರಿತು ವಿವರಿಸಿದರು. ಜಿಲ್ಲಾ ಅಧ್ಯಕ್ಷ ಜಿ.ವಿ. ಮೂರ್ತಿ ಕನ್ನಡದ ಕಾರ್ಮಿಕರ ನೋವುಗಳ ಕುರಿತು ಮಾತನಾಡಿದರು.
ತಾಲ್ಲೂಕು ಅಧ್ಯಕ್ಷ ಡಿ.ಆರ್. ನಾರಾಯಣ ಸ್ವಾಮಿ ಗಾರ್ಮೆಂಟ್ಸ್ ನೌಕರರ ಕಷ್ಟ ಸಂಕೋಲೆ ಕುರಿತು ಮಾತನಾಡಿದರು. ಕಲಾವಿದ ಕೆ. ರವಿಕುಮಾರ್ ಅಸಂಘಟಿತ ಕಾರ್ಮಿಕರಿಗೆ ಸಂಬಂಧಿಸಿದ ನೋವುಗಳ ಬಗ್ಗೆ ವಿವರಿಸಿದರು. ತಾಲ್ಲೂಕು ಉಪಾಧ್ಯಕ್ಷ ಕೆ.ಎಂ. ಮುನಿಕೃಷ್ಣ ರೇಷ್ಮೆ ನೌಕರರ ಸಮಸ್ಯೆ ಪರಿಹರಿಸಲು ಇರುವ ಮಾರ್ಗಗಳ ಬಗ್ಗೆ ಬೆಳಕು ಚೆಲ್ಲಿದರು.
ಸರ್ ಎಂ.ವಿ. ಕಾರ್ಮಿಕರ ಸೇವಾ ಸಂಘದ ತಾಲ್ಲೂಕು ಖಜಾಂಚಿ ಹರೀಶ್, ಕಾರ್ಯದರ್ಶಿ ಕೃಷ್ಣಪ್ಪ, ಸಹ ಸಂಚಾಲಕ ಸದಾಶಿವ, ನರಸಿಂಹ, ಕದೀರ್, ನಾಗೇಶ್ ಇದ್ದರು.