ಚಿಕ್ಕಬಳ್ಳಾಪುರ: ಉಪ ಚುನಾವಣೆಯಲ್ಲಿ ಹಂಚಲು ಜೆಡಿಎಸ್ ಮುಖಂಡ, ವಕೀಲ ಪಿ.ಸುಬ್ರಮಣ್ಯ ಅವರ ಮನೆಯಲ್ಲಿ ಹಣ ಸಂಗ್ರಹಿಸಲಾಗಿದೆ ಎಂಬ ದೂರೊಂದು ಬಂದ ಕಾರಣ ಮಾದರಿ ನೀತಿ ಸಂಹಿತೆ (ಎಂಸಿಸಿ) ತಂಡದ ಅಧಿಕಾರಿಗಳು ಜೈಭೀಮ್ ನಗರದಲ್ಲಿರುವ ಸುಬ್ರಮಣ್ಯ ಅವರ ನಿವಾಸದಲ್ಲಿ ಬುಧವಾರ ರಾತ್ರಿ ತಪಾಸಣೆ ನಡೆಸಿದರು.
ತಪಾಸಣೆ ವೇಳೆ ಸುಬ್ರಮಣ್ಯ ಅವರ ನಿವಾಸದಲ್ಲಿ ಸುಮಾರು ₹ 12.50 ಲಕ್ಷ ನಗದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಪತ್ತೆಯಾದ ಹಣ ತಮ್ಮ ಕಕ್ಷಿದಾರರು ನೀಡಿದ್ದು ಮತ್ತು ಹಣಕಾಸು ವಹಿವಾಟಿಗೆ ಸೇರಿದ್ದು ಎಂದು ಸುಬ್ರಮಣ್ಯ ಅವರು ತಿಳಿಸಿದ್ದಾರೆ ಎನ್ನಲಾಗಿದೆ.
ಎಂಸಿಸಿ ತಂಡದ ಮಾಹಿತಿ ಮೇರೆಗೆ ರಾತ್ರಿ 9ರ ಸುಮಾರಿಗೆ ಆದಾಯ ತೆರಿಗೆ ಇಲಾಖೆ ಬೆಂಗಳೂರು ವಿಭಾಗದ ಉಪ ನಿರ್ದೇಶಕ ಸುರೇಶ್ ಕುಮಾರ್ ಅವರು ಸುಬ್ರಮಣ್ಯ ಅವರ ಮನೆಗೆ ಬಂದು ಪತ್ತೆಯಾದ ಹಣದ ಮಾಹಿತಿ ಕಲೆ ಹಾಕಿ, ನಗದನ್ನು ವಶಕ್ಕೆ ಪಡೆದರು.